ಪಿರಿಯಾಪಟ್ಟಣ: ಆಟೊ ಚಾಲಕ ಹಾಗೂ ಆತನೊಂದಿಗಿದ್ದ ವ್ಯಕ್ತಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಅಸ್ಸಾಂನ ಯುವತಿಯೊಬ್ಬಳು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ ದೂರು ನೀಡಿರುವ ಘಟನೆ ನಡೆದಿದೆ.
ಯುವತಿಯು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಕಳೆದ ತಿಂಗಳು ನಡೆಯುತ್ತಿದ್ದ ಜನತಾ ಜೂನಿಯರ್ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು.
‘ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ನ. 25ರ ರಾತ್ರಿ ಗೆಳತಿಯೊಂದಿಗೆ ಊರಿಗೆ ತೆರಳಲು ಕುಶಾಲನಗರದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಮೈಸೂರಿನ ರೈಲು ನಿಲ್ದಾಣಕ್ಕೆ ಕರೆದೊಯ್ಯುವುದಾಗಿ ತಿಳಿಸಿದ ಆಟೊ ಚಾಲಕ ನಮ್ಮನ್ನು ಆಟೊದಲ್ಲಿ ಕೂರಿಸಿಕೊಂಡು ಪಿರಿಯಾಪಟ್ಟಣದ ರಾವಂದೂರು ರಸ್ತೆಯಲ್ಲಿರುವ ಜಮೀನೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ನನ್ನ ಗೆಳತಿ ತಪ್ಪಿಸಿಕೊಂಡು ಓಡಿ ಹೊದಳು. ನಂತರ ಆಟೊ ಚಾಲಕ ಹಾಗೂ ಆತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ನನ್ನ ಮೇಲೆ ಅತ್ಯಾಚಾರವೆಸಗಿ ನನ್ನಲ್ಲಿದ್ದ ಕಾಲು ಚೈನು, 3 ಸಾವಿರ ನಗದು, ಮೊಬೈಲ್ ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿ ಅಲ್ಲಿಯೆ ಬಿಟ್ಟು ಹೋದರು’ ಎಂದು ಯುವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಡಿವೈಎಸ್ಪಿ ನಂಜುಂಡ ಪಿರಿಯಾಪಟ್ಟಣಕ್ಕೆ ಭೇಟಿ ನೀಡಿ ಯುವತಿಯಿಂದ ಮಾಹಿತಿ ಪಡೆದುಕೊಂಡಿದ್ದು, ಸಿಪಿಐ ಪ್ರಸನ್ನಕುಮಾರ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.