ಮಂಡ್ಯ: ಡ್ರಾಪ್ ನೀಡುವ ನೆಪದಲ್ಲಿ ಯುವತಿಯನ್ನು ತನ್ನ ರೂಮಿಗೆ ಕರೆದೊಯ್ದ ಯುವ ವಕೀಲನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
ವಕೀಲನು ತಡರಾತ್ರಿ ಯುವತಿಯನ್ನು ರೂಮಿನಿಂದ ಹೊರಗೆ ಕಳುಹಿಸಿದಾಗ ಘಟನೆಯು ಪೊಲೀಸರ ಗಮನಕ್ಕೆ ಬಂದಿದ್ದು, ಮಾಹಿತಿ ಅರಿತ ಪೊಲೀಸರು ಆತನನ್ನು ಬಂಧಿಸಿದ್ದು, ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ವಕೀಲ ಸುರೇಶ್ ಅತ್ಯಾಚಾರ ಆರೋಪದ ಮೇಲೆ ಸಿಕ್ಕಿಬಿದ್ದಿರುವ ವಕೀಲನಾಗಿದ್ದು, ಪ್ರಸ್ತುತ ಕಲ್ಲಹಳ್ಳಿ ವಿ.ವಿ.ನಗರದ ಮನೆಯೊಂದರಲ್ಲಿ ಬಾಡಿಗೆಗೆ ರೂಂ ಹಿಡಿದು ವಾಸವಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿಗೆ ಸ್ವಲ್ಪ ತಿಳಿವಳಿಕೆ ಕಡಿಮೆ ಇದ್ದು, ಕಳೆದ ರಾತ್ರಿ ಬಸ್ಸ್ಟಾಂಡ್ಗೆ ಹೋಗಲು ಬನ್ನೂರು ರಸ್ತೆಯಲ್ಲಿರುವ ಬಸ್ ನಿಲುಗಡೆ ಸ್ಥಳದಲ್ಲಿ ಕಾಯುತ್ತಿದ್ದಳು. ಆಗ ಡ್ರಾಪ್ ನೀಡುವ ನೆಪದಲ್ಲಿ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಪೋಷಕರಿಂದ ಮಾಹಿತಿ ಪಡೆದ ಬಳಿಕವೇ, ಆಕೆ ಮಂಡ್ಯಕ್ಕೆ ಬಂದ ಕಾರಣ ತಿಳಿಯಲು ಸಾಧ್ಯ ಎಂದು ತಿಳಿಸಿದ್ದಾರೆ.
ವಕೀಲ ಸುರೇಶ್ ಈಗ ಪೊಲೀಸರ ಬಂಧನದಲ್ಲಿದ್ದು, ಪ್ರಕರಣ ದಾಖಲಿಸಿರುವ ಪಶ್ಚಿಮ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.