ಬೆಂಗಳೂರು: ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಹತ್ತು ತ್ವರಿತ ನ್ಯಾಯಾಲಯಗಳನ್ನು ತೆರೆಯಲಾಗುವುದು. ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸೋಮವಾರ ಇಲ್ಲಿ ಹೇಳಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಿಸಿದ ಪ್ರಕಾರ ತ್ವರಿತ ನ್ಯಾಯಾ ಲಯಗಳನ್ನು ತೆರೆಯಲಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಯೊಂದು ನ್ಯಾಯಾಲಯಕ್ಕೆ ಒಬ್ಬ ನ್ಯಾಯಾಧೀಶರು ಸೇರಿದಂತೆ ಒಟ್ಟು 37 ಸಿಬ್ಬಂದಿ ನೇಮಕ ಮಾಡಲಾಗುತ್ತದೆ.
ಸಚಿವರಿಗೆ ಪತ್ರ: ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವವರ ವಿರುದ್ಧ ಕಠಿಣ ಕ್ರಮವನ್ನು ಜಾರಿಗೊಳಿ ಸುವಂತೆ ಗೃಹ ಸಚಿವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಹೊಸ ನ್ಯಾಯಾಲಯ ಎಲ್ಲಿ?
ಬೆಂಗಳೂರು – 3, ಬೆಳಗಾವಿ, ದಕ್ಷಿಣ ಕನ್ನಡ, ಗುಲ್ಬರ್ಗ, ಮಡಿಕೇರಿ, ಮಂಡ್ಯ, ಮೈಸೂರು, ರಾಮನಗರ ತಲಾ ಒಂದು.
ರಾಜ್ಯ ಹಿಂದುಳಿದ ವರ್ಗಗಳ ಬಹಿರಂಗ ಸಭೆ
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇದೇ ೧೯ ಮತ್ತು ೨೦ ರಂದು ವಿವಿಧ ಜಾತಿ, ಜನಾಂಗಗಳ ಕುರಿತು ಬಹಿರಂಗ ವಿಚಾರಣಾ ಸಭೆ ಆಯೋಜಿಸಿದೆ. ಬೆಂಗಳೂರಿನ ವಸಂತನಗರದ ಆಯೋಗದ ಕಚೇರಿಯಲ್ಲಿ ಬೆಳಿಗ್ಗೆ ೧೧ಕ್ಕೆ ಸಭೆ ಆರಂಭವಾಗಲಿದೆ. ಸೆ.೧೯ ರಂದು ನಾಯರ್, ವೀರಶೈವ ಆದಿಬಣಜಿಗ, ಶಿವಸಿಂಪಿ ಹಾಗೂ ಮೊದಲಿಯಾರ್ ಜನಾಂಗಗಳಿಗೆ ಸಂಬಂಧಿಸಿದಂತೆ ಮತ್ತು ಸೆ. ೨೦ ರಂದು ಆರ್ಯವೈಶ್ಯ ಬೇರಿ ಚೆಟ್ಟಿಯಾರ್, ಗೋಂದಳಿ, ಯಲ್ಲಮ್ಮ ಒಕ್ಕಲಿಗ ಹಾಗೂ ಮುಖಾರಿ ಜನಾಂಗಗಳಿಗೆ ಸಂಬಂಧಿಸಿ ದಂತೆ ಬಹಿರಂಗ ವಿಚಾರಣೆ ಇದೆ.