ಉಪ್ಪುಂದ (ಬೈಂದೂರು) : ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಆಯೋಜಿಸಿದ್ದ ಠೇವಣಿ ಮೇಲಿನ ಅದೃಷ್ಟ ಬಹುಮಾನ ಯೋಜನೆಯ ಆಯ್ಕೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಉಪ್ಪುಂದದ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಜನರಲ್ಲಿ ಉಳಿತಾಯ ಪ್ರವೃತ್ತಿ ಪ್ರೋತ್ಸಾಹಿಸಲು ಸಂಘ ಈ ಯೋಜನೆ ಕೈಗೊಂಡಿತು. ಇದು ಸಾಕಷ್ಟು ಜನರನ್ನು ಪ್ರೇರೇಪಿಸಿತಲ್ಲದೆ, ಸಂಘದ ಠೇವಣಿ ವೃದ್ಧಿಗೂ ಕಾರಣವಾಯಿತು ಎಂದು ಹೇಳಿದರು.
ನಾಗೂರಿನ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಮೊದಲ ಬಹುಮಾನ ಹೀರೋ ಹೊಂಡಾ ಬೈಕ್ ಅನ್ನು ಪಡೆದುಕೊಂಡಿತು. ಹಿರಿಯಣ್ಣ ಶೆಟ್ಟಿ ದ್ವಿತೀಯ ಬಹುಮಾನವಾದ ಟಿವಿಎಸ್ ಸ್ಕೂಟಿ ಪಡೆದರು. ಯು. ಬಾಲಚಂದ್ರ ಬಳೆಗಾರ್, ಎನ್. ಸೀತಾ ಬಾಯಿ, ಎಂ.ರಾಘವೇಂದ್ರ ಭಟ್, ಬಿ.ರಾಮಕೃಷ್ಣ ಭಟ್, ಕೆ.ಜಾನಕಿ ನಾವಡ ಸಮಾಧಾನಕರ ಬಹುಮಾನವಾದ ಗ್ರೈಂಡರ್ ಗೆದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಹುಮಾನಗಳನ್ನು ವಿತರಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಗಣಪಯ್ಯ ಗಾಣಿಗ ಸ್ವಾಗತಿಸಿದರು. ರಘುರಾಮ ಆಚಾರ್ಯ ವಂದಿಸಿದರು. ಹಾವಳಿ ಬಿಲ್ಲವ ನಿರೂಪಿಸಿದರು. ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ. ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಇತರರು ಹಾಜರಿದ್ದರು.