ಲಿಂಗಸುಗೂರ: ಪಟ್ಟಣದ ಸಾಯಿ ಮಂದಿರ ನಿರ್ಮಾಣಗೊಂಡು ಮೂರು ವರ್ಷಗಳಾದ ಪ್ರಯುಕ್ತ ಭಾನುವಾರ ಸಾಯಿ ಸೇವಾ ಸಮಿತಿ ತೃತೀಯ ವಾರ್ಷಿಕೋತ್ಸವ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಾಯಿಬಾಬಾ ಉತ್ಸವ ಮೂರ್ತಿಯ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಭಾನುವಾರ ಸಂಜೆ ಸಾಯಿಬಾಬಾ ಮಂದಿರದಲ್ಲಿ ಅಲಂಕೃತಗೊಳಿಸಲಾಗಿದ್ದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಜಯಘೋಷಗಳನ್ನು ಹಾಕುತ್ತ ಪಲ್ಲಕ್ಕಿ ಮೆರವಣಿಗೆ ಆರಂಭಗೊಂಡಿತು. ಭಾಜಾ ಭಜಂತ್ರಿ, ಡೋಲು ವಾದ್ಯಗಳ ಸಮೇತ ಭಕ್ತಿ ಭಾವದಿಂದ ನೂರಾರು ಭಕ್ತರು ಮಂದಿರ ಪ್ರದಕ್ಷಿಣೆ ಹಾಕಿದರು.
ಬೆಳಿಗ್ಗೆ 5.30 ರಿಂದಲೆ ಬಾಬಾ ಅವರ ಮೂರ್ತಿಗೆ ಕಾಕಡ ಆರತಿಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡವು. ಗಣ ಹೋಮ, ಮಹಕ್ಷೀರಾಭಿಷೇಕ, ಬೆಳ್ಳಿಯ ಛತ್ರಿ ಸಮರ್ಪಣೆ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ಮುಗಿಯುತ್ತಿದ್ದಂತೆ ಪ್ರಸಾದ ವ್ಯವಸ್ಥೆ ಮಾಡ ಲಾಗಿತ್ತು. ಪಲ್ಲಕ್ಕಿ ಉತ್ಸವದ ನಂತರ ಧುಪಾರತಿ ಮತ್ತು ಶೇಜಾರತಿಯೊಂದಿಗೆ ಆಚರಣೆಗಳಿಗೆ ವಿರಾಮ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ. ಎಂ.ಪಿ. ಶೆಟ್ಟಿ, ಶ್ರೀನಿವಾಸರೆಡ್ಡಿ ಮುನ್ನೂರು, ರಮೇಶ ಖಂಡೇಲವಾಲ, ರಾಘವೇಂದ್ರ ಮುತಾಲಿಕ, ಮಹಾದೇವಯ್ಯ, ರಮೇಶ ಜೋಷಿ, ಚಂದ್ರಶೇಖರ ಪಾಟೀಲ, ಎಲ್.ಆರ್ ಮೇಟಿ, ರಾಚಪ್ಪ, ವರದಾರೆಡ್ಡಿ, ಮಲ್ಲಯ್ಯ ಜಾಲಹಳ್ಳಿ, ಪ್ರಲ್ಹಾದಶೆಟ್ಟಿ, ಪಂಪಣ್ಣ, ರಘುನಾಥ ಮತ್ತಿತರು ಪಾಲ್ಗೊಂಡಿದ್ದರು.