ಸುರಪುರ: ಪುರಸಭೆ ಅಧ್ಯಕ್ಷರಾಗಿ ದೇವೀಂದ್ರಪ್ಪ ಕಳ್ಳಿಮನಿ ಸೋಮವಾರ ಅಧಿಕಾರ ಸ್ವೀಕರಿಸಲು ಪುರಸಭೆ ಕಚೇರಿಗೆ ಆಗಮಿಸುತ್ತಿದ್ದಂತೆ ನಾಗರಿಕರು ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ಮಾಡಿದ ರು. ದೇವಿಂದ್ರಪ್ಪ ಮತ್ತು ಇತರ ಕಾಂಗ್ರೆಸ್ ಮುಖಂಡರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಅವರನ್ನು ಒಳ ಹೋಗದಂತೆ ತಡೆದರು.
ಅಧಿಕಾರ ಸ್ವೀಕರಿಸುವ ಮುಂಚೆಯೆ ಈ ಘಟನೆ ಎದುರಿಸುವಂತಾಗಿದ್ದು ನೂತನ ಅಧ್ಯಕ್ಷರಿಗೆ ಪ್ರಥಮ ಚುಂಬನ ದಂತ ಭಗ್ನ ಎನ್ನುವಂತಾಯಿತು. ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ವಿಠಲ ಯಾದವ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮಾಡಿದ ಯತ್ನ ವಿಫಲವಾಯಿತು.
ಸಮರ್ಪಕವಾಗಿ ನೀರು ಕೊಟ್ಟ ಮೇಲೆ ಅಧಿಕಾರ ಸ್ವೀಕರಿಸಲು ಬಿಡುತ್ತೇವೆ ಎಂದು ಪ್ರತಿಭಟನೆಕಾರರು ಘೋಷಣೆಗಳನ್ನು ಕೂಗತೊಡಗಿದರು. ಆಗ ಕಾಂಗ್ರೆಸ್ ಪಕ್ಷದ ಕೆಲ ಪುರಸಭೆ ಸದಸ್ಯರು ಮಾತಿನ ಚಕಮಕಿ ನಡೆಸಿದಾಗ ಪ್ರತಿಭಟನೆಕಾರರು ಪ್ರತಿರೋಧ ವ್ಯಕ್ತಪಡಿಸಿದರು.
ಕೊನೆಗೂ ವಿಠಲ ಯಾದವ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗೆ ಖಂಡಿತ ಪರಿಹಾರ ಕಂಡುಕೊಳ್ಳುತ್ತೇವೆ. ಅಧಿಕಾರ ಸ್ವೀಕರಿಸಲು ಬಿಡಿ ಎಂದು ಮನವಿ ಮಾಡಿದರು. ಬಳಿಕ ದೇವಿಂದ್ರಪ್ಪ ಅಧಿಕಾರ ಸ್ವೀಕರಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆ.ಡಿ.ಎಸ್. ಮುಖಂಡ ರಾಜಾ ರಾಮಪ್ಪನಾಯಕ ಜೇಜಿ ಮಾತನಾಡಿ, ಒಂದು ವರ್ಷದಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಪುರಸಭೆಗೆ ಮಾಡಿದ ಮನವಿಗಳು ಕಸದಬುಟ್ಟಿ ಸೇರಿವೆ. ಪ್ರತಿಭಟನೆಗಳಿಗೆ ಬೆಲೆ ಇಲ್ಲದಂತಾಗಿದೆ. ಹನಿ ನೀರಿಗೂ ಪರದಾಡುವಂತಾಗಿದೆ. ಮುಖಂಡರ ಮನವಿ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡಿದ್ದೇವೆ. ಶೀಘ್ರದಲಿ್ಲ ಕುಡಿಯುವ ನೀರು ಪೂರೈಕೆಯಾಗಬೇಕು. ವಿಳಂಬವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಭೀಮಾಶಂಕರ ಬಿಲ್ಲವ, ಮದನಮೋಹನ ಜೇವರ್ಗಿ, ಅರ್ಷದ ದಖನಿ, ಮನೋಹರ ಪತ್ತಾರ, ಖಾಜಾ ಖಲೀಲ ಅಹ್ಮದ ಅರಿಕೇರಿ, ಇಮ್ರಾನಬೇಗ, ಇಫ್ತೆಕಾರ ಹುಸೇನ, ರಾಜಗೋಪಾಲ ಮುಂದಡಾ, ಆರೀಫ್ ಬೇಗ, ವಾಜೀದ ನಗನೂರಿ, ಚಂದಪ್ಪ ಮ್ಯಾಗೇರಿ ಇತರ ನೂರಾರು ಜನ ಪ್ರತಿಭಟನೆಯಲ್ಲಿದ್ದರು.
ಅಧಿಕಾರ ಸ್ವೀಕಾರ: ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ದೇವೀಂದ್ರಪ್ಪ ಶಂಕ್ರಪ್ಪ ಕಳ್ಳಿಮನಿ ಸೋಮವಾರ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಪಟ್ಟಣದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ಮೇಲಿಂದ ಮೇಲೆ ಪೈಪ್ ಒಡೆಯುವುದು, ಟಿ.ಸಿ. ಸುಡುವುದು, ಇತರ ಕಾರಣಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಶಾಸಕ ರಾಜಾ ವೆಂಕಟಪ್ಪನಾಯಕ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಮೂಲಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ಚರಂಡಿ, ರಸ್ತೆ, ಬೀದಿ ದೀಪ ಒದಗಿಸಲಾಗುವುದು. ಸಮರ್ಪಕವಾಗಿ ಕೆಲಸ ನಿರ್ವಹಿಸದ ಸಿಬ್ಬಂದಿಯ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಶೀಘ್ರದಲ್ಲಿ ಸಿಬ್ಬಂದಿಯ ಸಭೆ ನಡೆಸುವುದಾಗಿ ಹೇಳಿದರು.
ಪುರಸಭೆಗೆ ಸಬಂಧಿಸಿದಂತೆ ಯಾವುದೆ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನ ಮೊಬೈಲ್ ಸಂಖ್ಯೆ 9448413611 ಸಂಪರ್ಕಿಸಿರಿ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿಠಲ ಯಾದವ, ರಾಜಾ ವೇಣುಗೋಪಾಲ ನಾಯಕ, ವಾಸುದೇವ ನಾಯಕ, ರಾಜಾ ರೂಪಕುಮಾರ ನಾಯಕ, ಪುರಸಭೆ ಸದಸ್ಯರಾದ ವೆಂಕಟೇಶ ಹೊಸಮನಿ, ರಾಜಾ ಪಿಡ್ಡನಾಯಕ ತಾತಾ, ಅಫ್ಸರ್ ಹುಸೇನ ದಿಲದಾರ, ಶೇಖ ಮಹಿಬೂಬ ಒಂಟಿ, ಹಣಮಂತ ಭದ್ರಾವತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.