ತುಮಕೂರು: ನಗರಸಭೆ ಅಧ್ಯಕ್ಷೆಯಾದ ಆರು ತಿಂಗಳಲ್ಲೇ ಅಧಿಕಾರದಿಂದ ಇಳಿಸಲು ಪಟಭದ್ರ ಶಕ್ತಿಗಳು ಒಳಸಂಚು ರೂಪಿಸುತ್ತಿವೆ ಎಂದು ಅಧ್ಯಕ್ಷೆ ದೇವಿಕಾ ಇಲ್ಲಿ ಭಾನುವಾರ ನೋವು ತೋಡಿಕೊಂಡರು.
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸರ್ವಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
`ಹೆಣ್ಣು ಮಕ್ಕಳಿಗೆ ಅಧಿಕಾರ ಸಿಕ್ಕರೆ ಅಸೂಯೆ ಪಡುವವರು ಹೇಗೆ ಉದ್ಭವವಾಗುತ್ತಾರೆ ಎಂಬುದಕ್ಕೆ ನನ್ನ ಅನುಭವವೇ ಸ್ಪಷ್ಟ ಉದಾಹರಣೆ. ಇಂತಹ ಸಂದರ್ಭದಲ್ಲಿ ಒಕ್ಕಲಿಗರ ಹೆಣ್ಣು ಮಗಳಿಗೆ ನಿಮ್ಮ ಸಹಕಾರಬೇಕು~ ಎಂದರು.
ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಒಕ್ಕಲಿಗ ಸಮುದಾಯದ ಉಪ ಜಾತಿಗಳಲ್ಲಿಯೇ ಭೇದ-ಭಾವ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಲಹೆ ಮಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಸಿ.ಚಿಕ್ಕಣ್ಣ ಮಾತನಾಡಿದರು.
ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಒಕ್ಕಲಿಗರ ಸಂಘದ ಜಂಟಿ ಕಾರ್ಯದರ್ಶಿ ಯಲಚವಾಡಿ ನಾಗರಾಜು, ಸಂಘದ ಅಧ್ಯಕ್ಷ ಕೆ.ಹನುಮಂತರಾಯಪ್ಪ, ನಗರಸಭೆ ಸದಸ್ಯೆ ಕಮಲಾ ಕೃಷ್ಣಮೂರ್ತಿ, ಮುಖಂಡರಾದ ಕೆ.ಬಿ.ಬೋರೇಗೌಡ, ಎಸ್.ಪುಟ್ಟೀರಪ್ಪ, ನರಸೇಗೌಡ, ಬೆಳ್ಳಿ ಲೋಕೇಶ್, ವಿ.ಕೆ.ವೀರಕ್ಯಾತರಾಯ ಉಪಸ್ಥಿತರಿದ್ದರು.