ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಪೂರ್ವ ಸಿದ್ದತಾ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗೈರು ಗಾಜರಾಗಿದ್ದರಿಂದ ಸಭೆಯನ್ನು ನ.5ಕ್ಕೆ ಮುಂದೂಡುವ ಜೊತೆಗೆ, ಶಾಸಕರು ಅಧಿಕಾರಿಗಳಿಗೆ ಛೀಮಾರಿ ಹಾಕಿದರು.
ಸಭೆಯನ್ನು ಸಮಯಕ್ಕೆ ಸರಿಯಾಗಿ ಪ್ರಾರಂಭಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ, ತಡವಾಗಿ ಆಗಮಿಸಿದ ಕೆಲವು ಅಧಿಕಾರಿಗಳಿಗೆ ತಮ್ಮ ಅಂಗರಕ್ಷನಿಂದ ಒಂದು ಹೂವಿನ ಹಾರ ಹಾಕಿಸಿ, ಛೀಮಾರಿ ಹಾಕಿ ಹೊರಗೆ ಕಳುಹಿಸಿದರು.
ಕನ್ನಡ ಭಾಷೆಯ ಬಗ್ಗೆ ನಿರ್ಲಕ್ಷ್ಯಧೋರಣೆ ತಾಳಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಕನ್ನಡ ರಾಜ್ಯೋತ್ಸವ ಆಚರಣೆ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಅಸಡ್ಡೆಯ ವಿರುದ್ಧ ಕೆಂಡಮಂಡಲವಾದ ಶಾಸಕರು ನ.5 ರಂದು ರಾಜ್ಯೋತ್ಸವ ಆಚರಣೆ ಬಗ್ಗೆ ಮತ್ತೊಮ್ಮೆ ಸಭೆ ನಡೆಸುವುದಾಗಿ ತಿಳಿಸಿದರು.
ಜಿ.ಪಂ. ಸದಸ್ಯ ಮುದ್ದುರಾಜ ಯಾದವ್, ತಹಶೀಲ್ದಾರ್ ನಿರಂಜನ ಬಾಬು, ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಜಿ. ಪಂ. ಸಹಾಯಕ ಎಂಜಿನಿಯರ್ ಶಂಕರನಾರಾಯಣ, ಡಾ. ರವಿಕುಮಾರ್, ನರಸಿಂಹಮೂರ್ತಿ ಇತರರು ಭಾಗವಹಿಸಿದ್ದರು.