ನರಗುಂದ: ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ವಿವಿಧ ಕಾರಣಗಳಿಂದ ಅಂಗವೈಕಲ್ಯ ಹಾಗೂ ಮಾನಸಿಕವಾಗಿ ಅಸ್ವಸ್ಥರಾದ ಮಕ್ಕಳು ಹೆಚ್ಚಾಗಿ ಕಂಡು ಬಂದಿದ್ದಾರೆ. ಇದನ್ನು ತಿಳಿದ ತಹಶೀಲ್ದಾರ ಪ್ರಕಾಶ ಗಣಾಚಾರಿ, ಭೇಟಿ ನೀಡಿ ಮಾಹಿತಿ ಪಡೆದರು. ವೈದ್ಯಾಧಿಕಾರಿ ಡಾ.ಮರಡ್ಡಿ ಯವರೊಂದಿಗೆ ಅರ್ಬಾಣ ಹಾಗೂ ಚಿಕ್ಕನರಗುಂದಕ್ಕೆ ಭೇಟಿ ನೀಡಿ ಸಮರ್ಪಕ ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ವಿಚಾರಿಸಿದರು.
ಈ ಸಂದರ್ಭಲ್ಲಿ ಅಂಗವೈಕಲ್ಯದಿಂದ ಬಳುತ್ತಿರುವ ಮಕ್ಕಳ ತಾಯಂದಿರು ` ಯಪ್ಪಾ ನಮ್ಮ ಮಕ್ಕಳು ಮಾತನಾಡದೇ ನಾಲ್ಕು ವರ್ಷ ಆಯಿತು, ಊಟಾನೂ ತಗೋಳುದು ಇಲ್ಲ, ಹಿಂಗಾದರ ನಮ್ಮ ಪಾಡೇನು ' ಸರಕಾರವು ಸಹಿತ ನಮಗೆ ಯಾವ ಸೌಲಭ್ಯ ನೀಡಿಲ್ಲ ಎಂದು ತಹಶೀಲ್ದಾರರ ಎದುರಿಗೆ ಅರ್ಬಾಣ ಓಣಿಯ ಮಹಾದೇವಿ ಪಾರ್ವತಿಯವರು ಹಾಗೂ ಚಿಕ್ಕನರಗುಂದದ ತಾಯಂದಿರು ಆಕ್ರೋಶ ವ್ಯಕ್ತಪಡಿಸಿದರು.
ತಪಾಸಣೆ ನಡೆಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಗಿರೀಶ ಮರಡ್ಡಿ ಈ ರೀತಿ ಅಂಗವೈಕಲ್ಯತೆ ಹಾಗೂ ಮಾನಸಿಕ ಅಸ್ವಸ್ಥಗೊಳ್ಳುವುದು ರಕ್ತ ಸಂಬಂಧ ವಿವಾಹದಿಂದ ಹಾಗೂ ಸೆರೆಬ್ರಲ್ ಪಲ್ಸಿಯಿಂದ ಈ ರೀತಿಯಾಗುತ್ತದೆ. ಇದನ್ನು ತಡೆಯಬೇಕಾದರೆ ಗರ್ಭಿಣಿಯರಿದ್ದಾಗಲೇ ಎನಾಮೆಲ್ ಸ್ಕ್ಯಾನಿಂಗ್ ಮೂಲಕ ಕಂಡು ಹಿಡಿದು ಮಗು ಸರಿಯಿದ್ದರೆ ಮಾತ್ರ ಹೆರಿಗೆ ಮುಂದುವರೆಯಬೇಕು. ಇಲ್ಲವಾದರೆ ಆಗಲೇ ಇದರ ಬಗ್ಗೆ ವೈದ್ಯಕೀಯ ಚಿಕಿತ್ಸೆ ಕೊಡಬೇಕಾಗುತ್ತದೆ ಎಂದರು. ಇದು ಎಂಡೋ ಸಲ್ಫಾನ್ ಎಫೆಕ್ಟ್ ಅಥವಾ ಜೀನ್ಸ್ ಎಫೆಕ್ಟ್ ಎಂಬುದನ್ನು ಕಂಡು ಹಿಡಿಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ರೀತಿಯ ಅಂಗವೈಕಲ್ಯ ಉಂಟಾಗಲು ಇದೇ ಕಾರಣವೆಂದು ಸರಿಯಾಗಿ ಹೇಳಲು ಅಸಾಧ್ಯ ಎಂದರು.
ಕೂಡಲೇ ಈ ಮಹಿಳೆ ಸಮಸ್ಯೆಗೆ ಸ್ಪಂದಿಸಿದ ತಹಶೀಲ್ದಾರ್ ಗಣಾಚಾರಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೂಡಲೇ ಈ ಮಕ್ಕಳ ಅಂಗವಿಕಲ ವೇತನದ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜೊತೆಗೆ ಶಿಶು ಅಭಿವೃದ್ಧಿ ಇಲಾಖೆಯಿಂದ ಸೌಲಭ್ಯ ಒದಗಿಸಿ ಕೊಡುವು ದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ನೀರಿಕ್ಷಕ ಪೂಜಾರ, ದೊಡಮನಿ, ವಿಜಯ ಕುಲಕರ್ಣಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.