ಬೆಂಗಳೂರು: `ಸೋಮೇಶ್ವರ ನಗರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಸಲೀಂ ಮತ್ತು ಅವರ ಕುಟುಂಬದ ಸದಸ್ಯರು ಕೋರ್ಟ್ನಿಂದ ತ್ವರಿತವಾಗಿ ನಿರೀಕ್ಷಣಾ ಜಾಮೀನು ಪಡೆಯಲು ಅಧಿಕಾರಿಗಳಿಂದಲೇ ಸಹಕಾರ ಸಿಕ್ಕಿದೆ' ಎಂದು ಬಿಜೆಪಿ ಆಪಾದಿಸಿದೆ.
ಪಕ್ಷದ ಸಹ ವಕ್ತಾರ ಅಶ್ವತ್ಥನಾರಾಯಣ್ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
`ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆಯಲು ತನಿಖಾಧಿಕಾರಿ, ಅವರೊಂದಿಗೆ ಶಾಮೀಲಾಗಿರುವ ಸಾಧ್ಯತೆ ಇದೆ. ಸರ್ಕಾರಿ ಅಭಿಯೋಜಕರು ಪರಿಣಾಮಕಾರಿ ವಾದ ಮಂಡಿಸದೇ ಇರುವುದೂ ಕಾರಣ' ಎಂದು ದೂರಿದ್ದಾರೆ.
`ನಿರೀಕ್ಷಣಾ ಜಾಮೀನು ರದ್ದುಗೊಳಿಸಲು ಮೇಲ್ಮನವಿ ಸಲ್ಲಿಸಿ, ಮುಖ್ಯ ಆರೋಪಿಯನ್ನು ಜೈಲಿಗೆ ತಳ್ಳಬೇಕು. ತನಿಖಾಧಿಕಾರಿ ಮತ್ತು ಸರ್ಕಾರಿ ಅಭಿಯೋಜಕರನ್ನು ಅಮಾನತು ಮಾಡಬೇಕು' ಎಂದು ಆಗ್ರಹಿಸಿದ್ದಾರೆ.
`ಅನುಮೋದಿತ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದಲ್ಲದೆ ಅತ್ಯಂತ ಕಳಪೆ ಗುಣಮಟ್ಟದ ಪದಾರ್ಥ ಬಳಸಿದ್ದರ ಪರಿಣಾಮ ಕಟ್ಟಡ ಕುಸಿದು ದುರ್ಘಟನೆ ಸಂಭವಿಸಿದೆ. ಇಷ್ಟಾದರೂ ಸಲೀಂ ಕಾನೂನಿನ ಅಂಜಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ಆರು ತಿಂಗಳಲ್ಲಿ ನಾಲ್ಕು ಕಟ್ಟಡಗಳು ಕುಸಿದು ಹಲವರ ಪ್ರಾಣಕ್ಕೆ ಎರವಾಗಿದೆ. ಬಡವರ ಪರ ಮಾತಿನಲ್ಲಿ ಕಳಕಳಿ ವ್ಯಕ್ತಪಡಿಸುವ ಕಾಂಗ್ರೆಸ್ ಆಡಳಿತದಲ್ಲಿ ಬಡವರ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ. ಹೀಗಾಗಿ ಮತ್ತೆ ಮತ್ತೆ ಇಂತಹ ಪ್ರಕರಣಗಳು ನಡೆಯುತ್ತಿವೆ' ಎಂದು ದೂರಿದ್ದಾರೆ.