ಶಿರಾ: ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ತಿಳಿವಳಿಕೆ ಕೊರತೆ ಇರುವುದರಿಂದ ಪದೇ ಪದೇ ಮಾಹಿತಿ ಆಯೋಗದ ಎದುರು ಹಾಜರಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಎಸ್.ಜೆ.ವಿರೂಪಾಕ್ಷಯ್ಯ ಇಲ್ಲಿ ಬುಧವಾರ ಹೇಳಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಎಲ್ಲ ಇಲಾಖೆ ಅಧಿಕಾರಿಗಳ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ಆಯೋಗದ ಎದುರು ಹಾಜರಾಗಿದ್ದೀರಿ ಎಂದರೆ ದಂಡ ಕಟ್ಟುವುದು ನಿಶ್ಚಿತ ಎಂದು ಎಚ್ಚರಿಸಿದರು.
ಅನೇಕ ಅಧಿಕಾರಿಗಳಿಗೆ ಮಾಹಿತಿ ಹಕ್ಕಿನ ಬಗ್ಗೆ ಅದೆಷ್ಟು ಅಜ್ಞಾನವಿದೆಯೆಂದರೆ ಅರ್ಜಿಗೆ ಲಗ್ಗತಿಸುವ ಪೋಸ್ಟಲ್ ಆರ್ಡರ್ಗಳ ಹಣವನ್ನು ಕೂಡ ಡ್ರಾ ಮಾಡಿಕೊಳ್ಳದೆ ಅದನ್ನು ಅರ್ಜಿಯೊಂದಿಗೆ ಲಗತ್ತಿಸಿಕೊಂಡು ಮಾಹಿತಿ ಆಯೋಗದ ಎದುರು ಹಾಜರಾಗುತ್ತಾರೆ ಎಂದು ತಿಳಿಸಿದರು.
ತಹಶೀಲ್ದಾರ್ ನಾಗಹನುಮಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಟಿ.ತಮ್ಮಣ್ಣ, ಗ್ರಾಮಾಂತರ ಸಿಪಿಐ ಪಿ.ರವಿ ಮತ್ತಿತರರಿದ್ದರು.