ಯಲಬುರ್ಗಾ: ತಾಲ್ಲೂಕಿನ ಮಾರನಾಳ, ಗೆದಗೇರಿ, ವಜ್ರಬಂಡಿ, ಮದ್ಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಕಳೆದ ಸಾಲಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಈಚೆಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎನ್.ಕೆ. ತೊರವಿ ವೀಕ್ಷಿಸಿದರು.
ಚೆಕ್ಡ್ಯಾಂ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ನಿರೀಕ್ಷಿತ ಗುಣಮಟ್ಟದಲ್ಲಿ ಕಾಮಗಾರಿಗಳಿಲ್ಲ, ಪೂರ್ಣ ಸಿದ್ಧಗೊಂಡನಂತರ ತೋರಿಸುವುದಕ್ಕಿಂತಲೂ ನಿರ್ಮಾಣದ ವಿವಿಧ ಹಂತಗಳಲ್ಲಿ ಕಾಮಗಾರಿಗಳನ್ನು ಅಧಿಕಾರಿಗಳಿಗೆ ತೋರಿಸಿದರೆ ಗುಣಮಟ್ಟದ ವಾಸ್ತವತೆ ಗೊತ್ತಾಗುತ್ತದೆ.
ಇತ್ತೀಚೆಗೆ ಸರ್ಕಾರದ ಕೆಲಸಗಳೆಂದರೆ ಕಾಟಾಚಾರದ ಕೆಲಸಗಳು ಎಂದೇ ಭಾವಿಸುತ್ತಾರೆ.
ಮೇಲಾಗಿ ಅವರಿವರ ಹೆಸರನ್ನು ಹೇಳುತ್ತಾ ಬೇಕುಬೇಡವಾಗಿ ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸಿ ಬಿಡುತ್ತಾರೆ. ಇಂತಹ ಸಂದರ್ಭದಲ್ಲಿ ಎಂಜಿನಿಯರ್ಗಳು ಮೇಲಿಂದ ಮೇಲೆ ಪರಿವೀಕ್ಷಣೆ ಮಾಡಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಿರಬೇಕು ಎಂದು ಎಂಜಿನಿಯರ್ಗಳಿಗೆ ಸಲಹೆ ನೀಡಿದರು.
ಜಿಪಂ ಸದಸ್ಯ ರಾಮಣ್ಣ ಸಾಲಭಾವಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ, ಎಂಜಿನಿಯರ್ ಕಳಕಯ್ಯ ಶಿರೂರುಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ನಾಯಕ ಮತ್ತಿತರರು ಹಾಜರಿದ್ದರು.