ನವದೆಹಲಿ (ಪಿಟಿಐ): ಈ ತಿಂಗಳ 5ರಿಂದ (ಗುರುವಾರ) 20ರವರೆಗೆ ನಡೆಸಲು ನಿಗದಿಯಾಗಿದ್ದ ಸಂಸತ್ನ ಚಳಿಗಾಲದ ಅಧಿವೇಶನವನ್ನು ಒಂದು ವಾರ ಬಿಡುವಿನ ನಂತರ ಮತ್ತೆ ಎರಡು ವಾರ ವಿಸ್ತರಿಸಲು ನಿರ್ಧರಿಸಲಾಗಿದೆ.
ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಇದರನ್ವಯ, ಈ ತಿಂಗಳ 20ರಿಂದ ಒಂದು ವಾರ ಕಾಲ ಕ್ರಿಸ್ಮಸ್ ಅಂಗವಾಗಿ ಸಂಸತ್ಗೆ ಬಿಡುವು ಇರಲಿದೆ. ಆನಂತರ 12 ಕೆಲಸದ ದಿವಸಗಳಲ್ಲಿ ಅಧಿವೇಶನ ಮುಂದುವರಿಯಲಿದೆ.
ಅಧಿವೇಶನ ವಿಸ್ತರಿಸಲು ಎಲ್ಲ ಪಕ್ಷಗಳಲ್ಲೂ ಬೆಂಬಲ ವ್ಯಕ್ತವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ತಿಳಿಸಿದರು.
ಆದರೆ ರಾಜ್ಯಸಭೆ ಸದಸ್ಯರು ಹಾಗೂ ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳ ಸಂಸದರ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದರು.
ತೆಲಂಗಾಣಕ್ಕೆ ಆಗ್ರಹ: ಪ್ರಸಕ್ತ ಅಧಿವೇಶನದಲ್ಲಿ ಚರ್ಚಿಸುವ ವಿಷಯಗಳ ಸರ್ಕಾರದ ಕಲಾಪ ಪಟ್ಟಿಯಲ್ಲಿ ತೆಲಂಗಾಣದ ಪ್ರಸ್ತಾಪ ಇಲ್ಲದಿದ್ದರೂ ಈಗಲೇ ಮಸೂದೆಗೆ ಅಂಗೀಕಾರ ನೀಡಬೇಕೆಂದು ಹಲವು ಪಕ್ಷಗಳು ಸರ್ವಪಕ್ಷಗಳ ಸಭೆಯಲ್ಲಿ ಒತ್ತಾಯಿಸಿದವು.
ಪ್ರಧಾನಿ ಸ್ಪಷ್ಟನೆ: ಈ ಬೇಡಿಕೆ ಹಿನ್ನೆಲೆಯಲ್ಲಿ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮನಮೋಹನ್ ಸಿಂಗ್, ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಸರ್ಕಾರ ಬದ್ಧವಾಗಿದ್ದು, ವಿಳಂಬವಾದ ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಲ್ಲ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.
ಈ ಮಧ್ಯೆ, ಸರ್ಕಾರ ಈಗಾಗಲೇ ಘೋಷಿಸಿರುವಂತೆ ಮಹಿಳಾ ಮೀಸಲು ಮತ್ತು ಲೋಕಪಾಲ ಮಸೂದೆಗಳನ್ನು ಪ್ರಸಕ್ತ ಅಧಿವೇಶನದಲ್ಲಿ ಅಂಗೀಕರಿಸಲು ಆದ್ಯತೆ ನೀಡಲಾಗುತ್ತದೆ.
ಈ ಅಧಿವೇಶನ ಬಿಸಿಬಿಸಿ ಚರ್ಚೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಎಡಪಕ್ಷಗಳು ಬೆಲೆ ಏರಿಕೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲಿದ್ದು, ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಳ ಮತ್ತು ಪಟ್ನಾ ಸ್ಫೋಟ ಕಾರಣ ಆಂತರಿಕ ಭದ್ರತೆ ಕುರಿತು ಚರ್ಚೆಗೆ ಆಗ್ರಹಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.