ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರನ್ನು ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರೂ, ಪಕ್ಷದ ಸ್ಲಂ ಮೋರ್ಚಾ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಇವರಿಬ್ಬರ ನಡುವೆ ಕುಶಲೋಪರಿಯ ಮಾತುಗಳು ವಿನಿಮಯವಾದವು.
ಬಿಜೆಪಿ ಕಚೇರಿ `ಜಗನ್ನಾಥ ಭವನ~ದಲ್ಲಿ ಸ್ಲಂ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಚಿವರಾದ ಜಗದೀಶ ಶೆಟ್ಟರ್ ಅವರೂ ಇದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ ಅವರು, ತಮ್ಮ ಮೊಮ್ಮಗಳ ಮದುವೆಯ ಆರತಕ್ಷತೆ ಸಮಾರಂಭ ಇರುವ ಕಾರಣ ಸಭೆಯಿಂದ ತೆರಳುವುದಾಗಿ ತಿಳಿಸಿದರು. ನಂತರ ಅನಂತ ಕುಮಾರ್ ಅವರಿದ್ದಲ್ಲಿ ಬಂದ ಬಿಎಸ್ವೈ, ಅವರ ಕಿವಿಯಲ್ಲಿ ಏನೋ ಹೇಳಿದರು. ಈ ಸಂದರ್ಭದಲ್ಲಿ ಅನಂತಕುಮಾರ್ ಮುಖದಲ್ಲೂ ಮುಗುಳ್ನಗು ಕಂಡುಬಂತು.