ಮಂಡ್ಯ: ಪ್ರಧಾನಮಂತ್ರಿ ಅಭ್ಯರ್ಥಿ ಆಯ್ಕೆ ಬಗೆಗೆ ಹೇಳಿಕೆ ನೀಡಲು ಎಲ್ಲರೂ ಸ್ವತಂತ್ರರಾಗಿದ್ದಾರೆ. ಆದರೆ, ತೀರ್ಪು ನೀಡುವುದು ಸರಿಯಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಹೇಳಿದರು.
ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ಬುಧವಾರ ನಡೆದ ‘ಚುಂಚಶ್ರೀ’ ಪ್ರಶಸ್ತಿ ಪ್ರದಾನ ಸಮಾ ರಂಭದ ನಂತರ ಮಾತನಾಡಿದ ಅವರು, ‘ರಾಹುಲ್ ಗಾಂಧಿಯೂ ಪ್ರಧಾನಿಯಾಗಲು ಯೋಗ್ಯರಲ್ಲ’ ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್್್. ಅನಂತಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ನೀಡಬೇಕು ಎಂಬು ದನ್ನು ಮತದಾರರು ನಿರ್ಧರಿಸುತ್ತಾರೆ. ಆ ಪಕ್ಷಗಳ ಯಾವುದಾದರೂ ಒಬ್ಬರು ಪ್ರಧಾನಿಯಾಗಲೇಬೇಕು. ಇಲ್ಲದಿದ್ದರೆ ಅರಾಜಕತೆ ಉಂಟಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರನ್ನು ಬಿಂಬಿಸುತ್ತದೆ. ಬಿಜೆಪಿಯು ನರೇಂದ್ರ ಮೋದಿ ಅವರನ್ನು ಬಿಂಬಿಸುತ್ತಿದೆ. ಆಯ್ಕೆ ಮತದಾರರಿಗೆ ಬಿಟ್ಟದ್ದಾಗಿದೆ ಎಂದ ಅವರು, ಲೋಕಸಭೆ ಅವಧಿ ಮುಗಿಯುವುದಕ್ಕೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದ ಕೀರ್ತಿ ಶಿವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಸಲುತ್ತದೆ ಎಂದರು.
‘ಚುಂಚಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್.ಎಲ್. ಭೈರಪ್ಪ, ಮೇಲು–ಕೀಳು ಆಚರಣೆಯನ್ನು ನಿಲ್ಲಿಸದಿದ್ದರೆ ಹಿಂದೂ ಧರ್ಮವೂ ನಾಶವಾಗುತ್ತದೆ. ಹಿಂದೂಗಳೆಲ್ಲ ಒಂದಾಗಬೇಕು ಎಂದು ಕರೆ ನೀಡಿದರು.
ಸಂಸ್ಕೃತ ಕಲಿಯಲು ಮನು ಅವಕಾಶ ನೀಡಲಿಲ್ಲ ಎಂದು ಟೀಕಿಸಿಕೊಂಡು ತಿರುಗುವುದು ಒಂದು ವರ್ಗವಾದರೆ; ಬಾಲಗಂಗಾಧರ ಸ್ವಾಮೀಜಿ ಅವರು ಎಲ್ಲರಿಗೂ ಕಲಿಯಲು ಅವಕಾಶ ನೀಡುವ ಮೂಲಕ ಕ್ರಾಂತಿ ಮಾಡಿದರು ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಮತ್ಸದ್ಧಿ ಎಚ್.ಜಿ. ಗೋವಿಂದಗೌಡ ಅವರ ಪರವಾಗಿ ಅವರ ಪುತ್ರ ವೆಂಕಟೇಶ್, ಡಾ.ಎಸ್.ಸಿ. ಶಂಕರೇಗೌಡ, ನಿವೃತ್ತ ಐಎಎಸ್ ಅಧಿಕಾರಿ ವೈ.ಕೆ. ಪುಟ್ಟಸೋಮೇಗೌಡ, ಸಂಸ್ಕೃತ ವಿದ್ವಾಂಸ ಶ್ರೀನಿವಾಸ್ಮೂರ್ತಿ ಅವರಿಗೆ ’ಚುಂಚಶ್ರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.