ಯಾದಗಿರಿ: ಮುಂದಿನ 10 ದಿನಗಳಲ್ಲಿ ಜಿಲ್ಲೆಯಲ್ಲಿರುವ ಅನಕ್ಷರಸ್ಥ ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಪಿ. ಸಾಸನೂರ ಹೇಳಿದರು. ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಮಟ್ಟದ ಸಾಕ್ಷರತಾ ಪ್ರೇರಕರಿಗೆ ಏರ್ಪಡಿಸಿದ್ದ 2 ನೇ ಹಂತದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಸಂಯೋಜನಾಧಿಕಾರಿ ಮಹಾನಂದಯ್ಯಸ್ವಾಮಿ ಅಧೋನಿ, ಈಗಾಗಲೇ ಮೊದಲ ಹಂತದಲ್ಲಿ ಅನಕ್ಷರಸ್ಥರ ಗಣತಿ ಮಾಡುವ ವಿಧಾನದ ಕುರಿತು ತಿಳಿಸಲಾಗಿದೆ. ಎರಡನೇ ಹಂತದ ತರಬೇತಿಯಲ್ಲಿ ಕುಟುಂಬ ಗಣತಿ ಮಾದರಿ ನೀಡಲಾಗಿದ್ದು, ಅದರನ್ವಯ ಗಣತಿ ಮಾಡಬೇಕು. ಅನಕ್ಷರಸ್ಥ ಕುಟುಂಬಗಳ ಸಮಗ್ರ ಮಾಹಿತಿಯನ್ನು ಕಲೆ ಹಾಕಬೇಕು ಎಂದು ತಿಳಿಸಿದರು.
ತರಬೇತುದಾರರಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಭೀಮರಾಯ ಮುಂಡರಗಿ, ತಾಲ್ಲೂಕು ಸಂಪನ್ಮೂಲ ವ್ಯಕ್ತಿ ವಿಶ್ವನಾಥರೆಡ್ಡಿ ಬೊಮ್ಮಶೆಟ್ಟಿಹಳ್ಳಿ ತರಬೇತಿ ನೀಡಿದರು. ಜಿಲ್ಲಾ ಸಂಯೋಜಕಿಯರಾದ ಮಂಜುಳಾ, ಬಸವಲಿಂಗಮ್ಮ ಸಾಕ್ಷರಗೀತೆ ಹಾಡಿದರು.
ಅದ್ದೂರಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧಾರ
ಯಾದಗಿರಿ: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಗರದಲ್ಲಿ ಭಾನುವಾರ ನಡೆದ ವಾಲ್ಮೀಕಿ ನಾಯಕ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.
ಅ.11 ರಂದು ಮಧ್ಯಾಹ್ನ 12 ಗಂಟೆಗೆ ಮೈಲಾಪುರ ಅಗಸಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದವರೆಗೆ ವಾಲ್ಮೀಕಿಯವರ ಭಾವಚಿತ್ರದ ಮೆರವಣಿಗೆ ಮಾಡಲಾಗುವುದು. ಸಂಜೆ 4 ಗಂಟೆಗೆ ಮೈದಾನದಲ್ಲಿ ಸಾರ್ವಜನಿಕ ಸಮಾರಂಭದ ಜರುಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದ್ದು, ಅಂದು ಎಲ್ಲ ಶಾಲೆ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ವಾಲ್ಮೀಕಿ ಜಯಂತಿ ಆಚರಿಸುವಂತೆ ಮನವಿ ಮಾಡಲಾಯಿತು. ಆಚರಣೆ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಸಂಘದ ಟಿ.ಎನ್. ಭೀಮುನಾಯಕ, ಚಂದ್ರಕಾಂತ ಹತ್ತಿಕುಣಿ, ಮರೆಪ್ಪ ನಾಯಕ, ಮೈನಪ್ಪ ಹಳ್ಳಿಗೇರಿ, ಭೀಮರಾಯ ಠಾಣಗುಂದಿ ಮುಂತಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.