ಮಂಡ್ಯ: ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಅನಕ್ಷರಸ್ಥರಿಗೆ ಅಕ್ಷರ ಜ್ಞಾನ ನೀಡಲು ಒತ್ತು ನೀಡಿ ಸಾಕ್ಷರತಾ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ. ಜಯರಾಂ ಹೇಳಿದರು.ಜಿಲ್ಲಾ ಲೋಕ ಶಿಕ್ಷಣಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಾಕ್ಷರತಾ ಕಾರ್ಯಕ್ರಮಗಳ ಹಿನ್ನೋಟ- ಮುನ್ನೋಟ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂಥ ಕಾರ್ಯಕ್ರಮಗಳಲ್ಲಿ ಸಮದಾಯದ ಪಾಲ್ಗೊಳ್ಳುವಿಕೆ ಮುಖ್ಯ. ಗ್ರಾಮ ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳು ಕೂಡಾ ಸಕ್ರಿಯವಾಗಿ ಇದರಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಾಹಿತಿ ಪ್ರೊ ಎಚ್.ಎಲ್.ಕೇಶವಮೂರ್ತಿ ಅವರು, ಜನರ ಆದಾಯ ಅಧಿಕ ಗೊಳಿಸುವ ಕಾರ್ಯಕ್ರಮ ರೂಪಿಸಲು ಒತ್ತು ನೀಡಬೇಕು ಎಂದರು.ರೈತ ನಾಯಕಿ ಸುನಂದಾ ಜಯರಾಮ, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಶಿವಣ್ಣಗೌಡ, ಕೆ.ಎಸ್.ಮಹದೇವಗೌಡ, ದಸಂಸದ ಗುರುಪ್ರಸಾದ್ ಕೆರೆಗೋಡು, ನಾಗಣ್ಣಗೌಡ, ಮಂಗಲ ಯೋಗೇಶ್, ಲೋಕಶಿಕ್ಷಣಾಧಿಕಾರಿ ಕೆ. ಕಾಳೇಗೌಡ ಮತ್ತಿತರರು ಭಾಗವಹಿಸಿದ್ದರು.
ಎಲ್ಲರ ಹೊಣೆ: ಪ್ರತಿಯೊಬ್ಬರು ತಮ್ಮ ಪಾಲಿನ ಹೊಣೆ ನಿಭಾಯಿಸಿದಾಗ ಸಾಕ್ಷರ ಸಮಾಜ ನಿರ್ಮಿಸುವುದು ಸಾಧ್ಯ ಎಂದು ಜಿಲ್ಲಾ ಲೋಕ ಶಿಕ್ಷಣ ಅಧಿಕಾರಿ ಕೆ. ಕಾಳೇಗೌಡ ಅವರು ಅಭಿಪ್ರಾಯಪಟ್ಟರು.ಬುಧವಾರ ನಡೆದ ಸಾಕ್ಷರ ಭಾರತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಇದರಲ್ಲಿ ಭಾಗವಹಿಸಿದ್ದರು.