ಯಲಹಂಕ: ಇಲ್ಲಿನ ಕೆರೆ ಪ್ರದೇಶದ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ 12 ಮನೆಗಳನ್ನು ಬಿಬಿಎಂಪಿ ಕೆರೆಗಳ ವಿಭಾಗದ ವತಿಯಿಂದ ಗುರುವಾರ ತೆರವುಗೊಳಿಸಿ ಐದು ಕೋಟಿ ರೂಪಾಯಿ ಮೌಲ್ಯದ 17 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಯಿತು.ಕೆರೆ ಸರ್ವೆ ಕಾರ್ಯ ನಡೆಸಿದ ನಂತರ ತಹಶೀಲ್ದಾರ್ ನಕ್ಷೆಗೆ ದೃಢೀಕರಣ ಮಾಡಿ, ಒತ್ತುವರಿಯಾಗಿದ್ದ ಜಾಗವನ್ನು ಗುರುತಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಜತೆಗೆ ಬೇಲಿ ನಿರ್ಮಾಣ ಹಾಗೂ ಇತರೆ ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು' ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಗಂಗಹನುಮಯ್ಯ ತಿಳಿಸಿದರು.ಸರ್ವೆ ಕಾರ್ಯ ನಡೆಸಿದ ಸಂದರ್ಭದಲ್ಲಿ 7 ಎಕರೆ 13 ಗುಂಟೆ ಜಾಗವು ಅನಧಿಕೃತವಾಗಿ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿತ್ತು. ಅದರಲ್ಲಿ ಈಗಾಗಲೇ 6 ಎಕರೆ 29 ಗುಂಟೆ ಜಾಗವನ್ನು ತೆರವುಗೊಳಿಸಲಾಗಿತ್ತು. ಗುರುವಾರ 17 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಯಿತು' ಎಂದು ಅವರು ವಿವರ ನೀಡಿದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಆರ್.ಕೇಶವಮೂರ್ತಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಶಪ್ಪ, ಪರಿಸರ ಎಂಜಿನಿಯರ್ ಸ್ವಪ್ನಾ ಹಾಜರಿದ್ದರು.