ಬೆಂಗಳೂರು: ಪಾಲಿಕೆ ಅಥವಾ ಇನ್ನಿತರೆ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೆ ಸುಮಾರು ಎರಡು ತಿಂಗಳಿಂದ ಅನಧಿಕೃತವಾಗಿ ನಡೆಸುತ್ತಿದ್ದ ನೀರಿನ ಶುದ್ಧೀಕರಣ ಹಾಗೂ ಮಾರಾಟ ಘಟಕಕ್ಕೆ ಬಿಬಿಎಂಪಿ ಪೂರ್ವ ವಲಯದ ಆರೋಗ್ಯಾಧಿಕಾರಿಗಳು ಗುರುವಾರ ಬೀಗ ಜಡಿದಿದ್ದಾರೆ.
ಈ ಕಾರ್ಯಾಚರಣೆ ಸಂದರ್ಭದಲ್ಲಿ ನೀರಿನ ಕ್ಯಾನ್ಗಳು, ಡ್ರಮ್ಗಳು ಮತ್ತು ವಾಟರ್ ಫಿಲ್ಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗವಾರ ವ್ಯಾಪ್ತಿಯ ಗೋವಿಂದಪುರದ 17ನೇ ಅಡ್ಡರಸ್ತೆಯ ರಶೀದಿಯಾ ಮಸೀದಿ ಹಿಂಭಾಗದಲ್ಲಿ ಈ ಘಟಕವನ್ನು ನಡೆಸಲಾಗುತ್ತಿತ್ತು.
ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ಥಳೀಯ ನಾಗರಿಕರು ನೀಡಿದ ದೂರಿನ ಮೇರೆಗೆ ಪಾಲಿಕೆಯ ಉಪ ಆರೋಗ್ಯ ಅಧಿಕಾರಿ (ಪೂರ್ವ) ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರ ತಂಡವನ್ನು ರಚಿಸಲಾಗಿತ್ತು.