ಮಳವಳ್ಳಿ: ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟವಾಗುತ್ತಿರುವುದನ್ನು ತಡೆಗಟ್ಟಬೇಕು, ದಲಿತರಿಗೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆಯಾಗಬೇಕು. ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ಸರಿಪಡಿಸಬೇಕು..
ಹೀಗೆ ಹಲವು ದೂರುಗಳನ್ನು ತಾಲ್ಲೂಕಿನ ದಲಿತ ಮುಖಂಡರು ಮನವಿ ಮಾಡಿದರು.
ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಗುರುವಾರ ಧರಣೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿದ್ದ ಹಲವರು, ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದರು.
ಪ್ರತಿ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅನಧಿಕೃತ ಮಾರಾಟಕ್ಕೆ ಅಬಕಾರಿ ಇಲಾಖೆಯವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕಿನ ಹಲಗೂರು ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದು ಅದನ್ನು ವಿರೋಧಿಸಿ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಹಾಕಿ ಗೊಂದಲ ಸೃಷ್ಟಿಸಿದ್ದಾರೆ. ದಲಿತರ ಬಗ್ಗೆ ಕಾಳಜಿ ಸರ್ಕಾರಕ್ಕೆ ಇದ್ದರೆ ಈ ಸ್ಥಳವನ್ನು ನೀಡಲು ಮುಂದಾಗಬೇಕು. ಇದಕ್ಕೆ ನಿಮ್ಮ ಇಲಾಖೆ ಗಮನ ನೀಡಲು ಸಾಧ್ಯವೇ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಂದಾನಯ್ಯ ಪ್ರಶ್ನಿಸಿದರು.
ತಾಲ್ಲೂಕಿನ 144 ಗ್ರಾಮಗಳಲ್ಲಿ ದಲಿತರು ವಾಸವಿದ್ದು ಅವುಗಳಲ್ಲಿ ಕೆಲವೇ ಗ್ರಾಮಗಳಲ್ಲಿ ಪ್ರತ್ಯೇಕ ಸ್ಮಶಾನವಿದೆ. ಆದರೆ, ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ತೊಂದರೆಯಾಗುತ್ತಿದ್ದು ಸ್ಮಶಾನದ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಇಲಾಖೆಯೊಡನೆ ಚರ್ಚಿಸಿ ಎಂದು ಹಲವು ಮುಖಂಡರು ಮನವಿ ಮಾಡಿದರು.
ಪಟ್ಟಣದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಶಾಲಾ ವೇಳೆಯಲ್ಲಿ ಮಕ್ಕಳು ರಸ್ತೆ ದಾಟುವುದೇ ತೊಂದರೆಯಾಗಿದೆ. ಇದರ ಬಗ್ಗೆ ಗಮನ ನೀಡಿ ಎಂದು ಮರಿಸ್ವಾಮಿ, ಬಸವರಾಜು ಮನವಿ ಮಾಡಿದರು.
ಹಲಗೂರು-–ಭಾರತಿನಗರ ವೃತ್ತ ನಿರೀಕ್ಷಕ ಎಚ್.ಇ. ಗಂಗಾಧರಸ್ವಾಮಿ, ಗ್ರಾಮಾಂತರ ವೃತ್ತ ನಿರೀಕ್ಷಕ ಎಚ್.ಕೆ.ಶಿವಸ್ವಾಮಿ ಇದ್ದರು.