ಶ್ರೀಕೃಷ್ಣ ಕಲ್ಚರಲ್ ಅಕಾಡೆಮಿಯ ಗುರು ನಾಗಲಕ್ಷ್ಮಿ ಅವರ ಶಿಷ್ಯೆ ಅನನ್ಯ ಈಚೆಗೆ ಯವನಿಕದಲ್ಲಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೋಜ್ಞ ಭರತನಾಟ್ಯ ಪ್ರದರ್ಶನ ನೀಡಿದರು.
ಆರಂಭದಲ್ಲಿ ನಾಟರಾಗದ ಆದಿತಾಳ ಪುಷ್ಪಾಂಜಲಿಯ ಪ್ರಾರ್ಥನಾ ನೃತ್ಯದೊಂದಿಗೆ ವೇದಿಕೆ ಮೇಲೆ ಬಂದು ಗಣೇಶನಿಗೆ ಭಕ್ತಿ ಪರವಶರಾಗಿ ನೃತ್ಯದ ಮೂಲಕ ವಂದಿಸಿದರು. ಗುರುಗಳ ತಾಳಕ್ಕೆ ತಕ್ಕಂತೆ ಪಕ್ಕವಾದ್ಯಕ್ಕೆ ಸರಿಸಾಟಿಯಾಗಿ ಜತಿ ಸ್ವರವನ್ನು ಚಾಕಚಕ್ಯತೆಯಿಂದ ಅಭಿನಯಿಸಿದರು.
ಸುಂದರವಾಗಿ ಶಬ್ದಂ ಪ್ರದರ್ಶಿಸಿದ ಅವರ ಮತ್ತೊಂದು ಮನೋಲ್ಲಾಸ ನೃತ್ಯ ಕನಕದಾಸರ ರಚನೆಯ ರಾಗಮಾಲಿಕೆ ಮತ್ತು ಮಿಶ್ರ ಛಾಪುತಾಳದಲ್ಲಿ ಕೂಡಿತ್ತು. ನಂತರ ಕೃಷ್ಣ ಲೀಲೆಗಳು ಮತ್ತು ವರ್ಣನೆಯ ಅಭಿನಯ. `ಮಧುರವೂ ಮಧುರ~ ಎಂಬ ಕೃಷ್ಣ ಗೀತೆಯ ಮೂಲಕ ಸಖಿಯರ ವರ್ಣನೆ, ಅದರಿಂದ ಹೊಗಳುವ ತೆಗಳುವ ಇರಿಸು ಮುರಿಸಾಗುವ ಚಿಂತೆ ಮತ್ತು ಸಂತೋಷಗಳ ಸುದ್ದಿ ಮುಟ್ಟಿಸುವ ಪರಿಯನ್ನು ಸುಂದರವಾಗಿ ಅಭಿನಯಿಸಿದರು.
ಪಕ್ಕವಾದ್ಯದಲ್ಲಿ ಸಹಕರಿಸಿದ ವಿದುಷಿ ನಾಗಲಕ್ಷ್ಮಿ (ನಟುವಾಂಗ), ಭಾರತಿ ವೇಣುಗೋಪಾಲ್ (ಹಾಡುಗಾರಿಕೆ), ಸಾಯಿನಾರಾಯಣ್(ಮೃದಂಗ), ಶ್ರೇಯಸ್ (ಕೊಳಲು) ನೃತ್ಯದ ಸೊಬಗು ಹೆಚ್ಚಿಸಿದರು.