ಔರಾದ್: ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಅನಾಥ ಮಕ್ಕಳಿಬ್ಬರಿಗೆ ಸಹಾಯಧನ ನೀಡಲು ಸಂತಪುರನ ವಿಶ್ವಭಾರತಿ ಸೇವಾ ಸಂಸ್ಥೆ ಮುಂದೆ ಬಂದಿದೆ.
ಸಂತಪುರನ ಕಲಾವಿದ ಸೂರ್ಯಕಾಂತ ಮಾಲಿಪಾಟೀಲ ಮತ್ತು ಅವರ ಧರ್ಮಪತ್ನಿ ಜಯಶ್ರೀ ಕಳೆದ ಒಂದೇ ತಿಂಗಳಲ್ಲಿ ವಿಧಿವಶರಾಗಿದ್ದಾರೆ. ಇವರಿಗೆ ಅಶ್ವಿನಿ (5) ಮತ್ತು ಅಕ್ಷತಾ (3) ಎಂಬ ಮುದ್ದು ಮಕ್ಕಳಿದ್ದಾರೆ. ಏಕ ಕಾಲಕ್ಕೆ ತಂದೆ ತಾಯಿ ಕಳೆದುಕೊಂಡು ತಬ್ಬಲಿಯಾದ ಈ ಮಕ್ಕಳಿಗೆ ಪ್ರಜ್ಞಾವಂತ ಸಮಾಜದ ಆಶ್ರಯ ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ವಿಶ್ವಭಾರತಿ ಸೇವಾ ಸಂಸ್ಥೆ ಅನಾಥ ಮಕ್ಕಳ ಬಗ್ಗೆ ಅನುಕಂಪ ತೋರಿದೆ. ತಮ್ಮ ಸಂಸ್ಥೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿನೋದಕುಮಾರ ನೀಡಿದ ರೂ. 4000 ದೇಣಿಗೆ ಮಕ್ಕಳ ಅಭ್ಯಾಸದ ಖರ್ಚಿಗೆ ಕೊಡಲಾಗುವುದು ಎಂದು ವಿಶ್ವಭಾರತಿ ಸೇವಾ ಸಂಸ್ಥೆ ಅಧ್ಯಕ್ಷ ಪ್ರಭುಶೆಟ್ಟಿ ಸೈನಿಕಾರ ತಿಳಿಸಿದ್ದಾರೆ.
ಪತ್ನಿ ಜಯಶ್ರೀ ಸಾವಿನ ದುಃಖ ಸಹಿಸಿಕೊಳ್ಳಲಾಗದೆ ಸೂರ್ಯಕಾಂತ ಪಾಟೀಲ ಮೃತಪಟ್ಟಿದ್ದಾರೆ. ಸೈಕಲ್ ರಿಪೇರಿ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದ ಪಾಟೀಲ ಕುಟುಂಬಕ್ಕೆ ದೊಡ್ಡ ಅಘಾತವನ್ನುಂಟು ಮಾಡಿದೆ.
ಇಂಥ ವೇಳೆ ಅನಾಥರಾದ ಅವರ ಇಬ್ಬರು ಮಕ್ಕಳಿಗೆ ಸಮಾಜ ಮತ್ತು ಸಂಘ ಸಂಸ್ಥೆಗಳು ನೆರವಿಗೆ ಬಂದು ಮಾನವೀಯತೆ ಮೆರೆಯಬೇಕಾಗಿದೆ.