ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಕೇತನ ಅಗಾಧ ಸ್ಮರಣೆ

Last Updated 20 ಡಿಸೆಂಬರ್ 2010, 13:55 IST
ಅಕ್ಷರ ಗಾತ್ರ


ನಮ್ಮ ದೇಶದಲ್ಲಿ ಹಿಂದೆಲ್ಲ ಏಕಪಾಠಿ, ದ್ವಿಪಾಠಿ, ತ್ರಿಪಾಠಿಗಳೆಂಬ ಬಿರುದು ಹೊತ್ತ ಪಂಡಿತರಿದ್ದರು. ಯಾವುದನ್ನಾದರೂ ಒಂದೇ ಒಂದು ಸಲ, ಎರಡು ಸಲ ಅಥವಾ ಮೂರು ಸಲ ಆಲಿಸಿದಲ್ಲಿ ಬಾಯಿಪಾಠ ಒಪ್ಪಿಸುತ್ತಿದ್ದರು. ಅದು ಅವರ ಗ್ರಹಣ- ಸ್ಮರಣ ಸಾಮರ್ಥ್ಯ. ಅಂಥದ್ದೇ ಅಗಾಧ ಸ್ಮರಣ ಶಕ್ತಿಯುಳ್ಳ ಪುಟ್ಟ ಬಾಲಕ ಬೆಂಗಳೂರಿನಲ್ಲಿದ್ದಾನೆ. ಆತ ಅನಿಕೇತ್.

ಯಾವುದೇ ದೇಶದ ಬಾವುಟಗಳನ್ನು ತೋರಿಸಿದರೆ ಅದರ ರಾಜಧಾನಿ, ವಿಶ್ವಭೂಪಟದಲ್ಲಿ ಅದರ ನಕ್ಷೆಯನ್ನು ಸರಿಯಾಗಿ ತೋರಿಸುವುದು ಅನಿಕೇತ್‌ನ ಹೆಗ್ಗಳಿಕೆ. ಕಾರಿನ ಮಾಡೆಲ್‌ಗಳು, ಕಂಪೆನಿಗಳ ಲಾಂಛನಗಳನ್ನು ತೋರಿಸಿದರೆ ಇದು ಯಾವು ಕಂಪೆನಿಯದ್ದು ಎಂದು ನಿಖರವಾಗಿ ಹೇಳಿ ಎಲ್ಲರನ್ನೂ ನಿಬ್ಬೆರಗಾಗಿಸುತ್ತಾನೆ. ಪಂಚಾಂಗದಲ್ಲಿ ಬರುವ ಅರವತ್ತು ಸಂವತ್ಸರಗಳೂ ಇವನಿಗೆ ಕಂಠಪಾಠ. ಇಷ್ಟೆಲ್ಲ ಪ್ರತಿಭೆಯ ಅನಿಕೇತ್ ಬಿಷಪ್ ಕಾಟನ್ ಬಾಲಕರ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ. ಬೆಂಗಳೂರು ಮೆಟ್ರೊ ರೈಲು ನಿಗಮದ ಉಪ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ ಮತ್ತು ಸಾವಿತ್ರ ಗುಡ್ಗೆಯವರ ಮಗ. ಬಾಲ್ಯದಿಂದಲೂ ಬಲು ಚೂಟಿ.

ಮೊದಲ ವರ್ಷದ ಹುಟ್ಟು ಹಬ್ಬದಲ್ಲಿ ವಿವಿಧ ಆಕೃತಿಗಳನ್ನು ನೋಡಿ ಕುತೂಹಲದಿಂದ ಕಲಿತ ಈತನಿಗೆ ಅಗಾಧ ಗ್ರಹಿಕಾ ಸಾಮರ್ಥ್ಯ ಇರುವುದು ಪಾಲಕರಿಗೆ ತಿಳಿಯಿತು. ಮೊದಲು ಅವನಿಗೆ ಪವರ್ ಪಾಯಿಂಟ್ ಮೂಲಕ ದೇಶದ ವಿವಿಧ ರಾಜ್ಯ ಮತ್ತು ಅವುಗಳ ರಾಜಧಾನಿ ಕುರಿತು ಮಾಹಿತಿ ನೀಡಿದರು. ಮಹಾಭಾರತದ ಪ್ರಮುಖ ಪಾತ್ರಗಳ ಬಗ್ಗೆ ತಿಳಿಸಿಕೊಟ್ಟರು.

ನಂತರ ಅವನೇ ಸ್ವಪ್ರಯತ್ನದಿಂದ ವಿಶ್ವದ ವಿವಿಧ ದೇಶ ಮತ್ತು ರಾಜಧಾನಿ ನಕ್ಷೆಗಳನ್ನು ಗುರುತಿಸುತ್ತ ಬಂದ ಎಂದು ಹೇಳುತ್ತಾರೆ ಅನಿಕೇತ್‌ನ ತಂದೆ.  ಈಗಲೂ ವಾರದಲ್ಲಿ ಆತನಿಗೆ ಎರಡು ತಾಸು ವಿವಿಧ ವಿಚಾರಗಳ ಬಗ್ಗೆ ಅಪ್ಪ ಅಮ್ಮನಿಂದ ಪಾಠ. ಬಿಡುವಿನ ಸಮಯದಲ್ಲಿ ಆತ ಸಿನಿಮಾ ನೋಡುತ್ತಾನೆ. ಆ ಬಳಿಕ ಸಿನಿಮಾದ ಹಾಡು ಮತ್ತು ಸಂಭಾಷಣೆಗಳನ್ನು ಯಥಾವತ್ತಾಗಿ ಹೇಳುತ್ತಾನೆ. ರಾಜ್ಯದ ಸಂಸದರ ಚಿತ್ರಗಳನ್ನು ತೋರಿಸಿದರೆ ಯಾವ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ ಎಂದು ಹೇಳುವ ಅನಿಕೇತ್ ಮುಂದೆ ಎಂಜಿನಿಯರ್ ಆಗುವ ಕನಸನ್ನು ಹೊಂದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT