ಬೆಂಗಳೂರು: ಬೆಂಗಳೂರು ಉತ್ತರ ಭಾಗದ ಹೊರ ವರ್ತುಲ (ಪೆರಿಫೆರಲ್) ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಜಮೀನು ಅಧಿಸೂಚನೆ ಮಾಡಿರುವ ಕ್ರಮದಿಂದ ರೈತರು ಅತಂತ್ರರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಸೋಮವಾರ ನಗರದ ಬಿಡಿಎ ಪ್ರಧಾನ ಕಚೇರಿಯ ಮುಂದೆ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
`ಏಳು ವರ್ಷಗಳ ಹಿಂದೆ ಹೊರ ವರ್ತುಲ ರಸ್ತೆಗೆಂದು ಬಿಡಿಎ ಬೆಂಗಳೂರು ಹೊರವಲಯದ ಸುಮಾರು 2 ಸಾವಿರ ಎಕರೆ ಭೂಮಿಗೆ ಅಧಿಸೂಚನೆ ಹೊರಡಿಸಿತ್ತು. ಇಲ್ಲಿಯ ವರೆಗೆ ಅಲ್ಲಿ ರಸ್ತೆಯನ್ನೂ ನಿರ್ಮಿಸಿಲ್ಲ. ಪರಿಹಾರದ ಹಣವನ್ನೂ ಕೊಟ್ಟಿಲ್ಲ. ಹೆಸರಘಟ್ಟ, ಯಲಹಂಕ, ದಾಸನಪುರ, ವರ್ತೂರು, ಕೆ.ಆರ್.ಪುರಂ ಹೋಬಳಿಗಳ ಸುಮಾರು 80 ಹಳ್ಳಿಗಳ ಸುಮಾರು 8 ಸಾವಿರ ರೈತರು ಏಳು ವರ್ಷಗಳಿಂದ ಕೃಷಿಯನ್ನೂ ಮಾಡದೇ, ತಮ್ಮ ಜಮೀನನ್ನು ಮಾರಲೂ ಆಗದೇ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
`ಏಳು ವರ್ಷಗಳಿಂದ ಆಗಿರುವ ನಷ್ಟವನ್ನು ಬಿಡಿಎ ತುಂಬಿಕೊಡಬೇಕು. ಇಲ್ಲವಾದರೆ ನಿರಪೇಕ್ಷಣಾ ಪತ್ರವನ್ನಾದರೂ ನೀಡಬೇಕು. ಅಲ್ಲಿಯವರೆಗೆ ಧರಣಿ ಮುಂದುವರೆಯಲಿದೆ. ಮುಖ್ಯಮಂತ್ರಿಗಳೇ ಮಧ್ಯ ಪ್ರವೇಶ ಮಾಡಿ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು~ ಎಂದು ಅವರು ಆಗ್ರಹಿಸಿದರು.
ಧರಣಿಯಲ್ಲಿ ರೈತಸಂಘದ ರಘು, ಜಯರಾಮ್, ವಿಜಯ್ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಧರಣಿಗೆ ಹಸು, ಕುರಿ, ಎಮ್ಮೆಗಳನ್ನೂ ಕರೆತರಲಾಗಿತ್ತು.