ವಿಟ್ಲ: ಜಾಗದ ವಿವಾದವೊಂದು ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿರುವ ಮಧ್ಯೆ ಕಂದಾಯ ಇಲಾಖೆ ಕೃಷಿಭೂಮಿಯ ಬೆಳೆ ನಾಶಪಡಿಸಿದ ಘಟನೆ ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ಎಂಬಲ್ಲಿ ಗುರುವಾರ ನಡೆದಿದೆ.
ವಿಟ್ಲ ಸಮೀಪದ ಅನಿಲಕಟ್ಟೆ ಸುರಂಗದಮೂಲೆ ದಿ.ರಾಮಣ್ಣ ಗೌಡ ಮತ್ತು ಮೀನಾಕ್ಷಿ ದಂಪತಿ ಪುತ್ರ ಹೊನ್ನಪ್ಪ ಗೌಡ, ಗೋಪಾಲಕೃಷ್ಣ ಎಂಬವರ ಸ.ನಂ. 535/3ಎಯಲ್ಲಿ 45 ಸೆಂಟ್ಸ್ ಕೃಷಿ ಭೂಮಿ ನಾಶಗೊಂಡಿದೆ.
ಇವರ ವರ್ಗ ಸ್ಥಳದಲ್ಲಿರುವ ಸುಮಾರು 100 ಅಡಿಕೆ ಮರ, 33 ತೆಂಗು, ಹಲವಾರು ಬಾಳೆ ಗಿಡಗಳನ್ನು ಇಲಾಖೆ ನಾಶ ಮಾಡಿದೆ. ನೀರಾವರಿ ಪೈಪ್ಲೈನ್ ಧ್ವಂಸಗೊಂಡಿದೆ.
ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಜಾಗದ ಅಳತೆ ಮಾಡದೆ ದಿಢೀರನೇ ಸ್ಥಳಕ್ಕಾಗಮಿಸಿ ಹಿಟಾಚಿ ಯಂತ್ರವನ್ನು ಬಳಸಿ ಬೆಳೆನಾಶ ಮಾಡಿದ್ದಾರೆ. ಪಕ್ಕದಲ್ಲೇ ಇರುವ ಸರ್ಕಾರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳದೆ ರಾಜಕೀಯ ಒತ್ತಡದಿಂದ ಅನ್ಯಾಯವೆಸಗಿದ್ದಾರೆ. ಇಲಾಖಾಧಿಕಾರಿಗಳು ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಅವರು ಅಳಲು ವ್ಯಕ್ತಪಡಿಸಿದ್ದಾರೆ.