ನವದೆಹಲಿ (ಪಿಟಿಐ): 2ಜಿ ಹಗರಣ ಕುರಿತಂತೆ ಅನಿಲ್ ಅಂಬಾನಿ ನೇತೃತ್ವದ ಆರ್ಎಡಿಎಜಿ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದ್ದು ಅವರನ್ನು ದೋಷಮುಕ್ತಗೊಳಿಸಿಲ್ಲ ಎಂದು ಸಿಬಿಐ ಸ್ಪಷ್ಟನೆ ನೀಡಿದೆ.
ಸ್ಪೆಕ್ಟ್ರಂ ಪರವಾನಗಿ ಪಡೆದ ಸ್ವಾನ್ ಟೆಲಿಕಾಂಗೆ ಸಂಬಂಧಿಸಿದಂತೆ ವಿವಿಧ ಕಂಪೆನಿಗಳನ್ನು ಹುಟ್ಟು ಹಾಕಿ ಹಣ ವರ್ಗಾವಣೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎನ್ನುವ ಮೂಲಕ ಸಿಬಿಐ ಅನಿಲ್ ಅಂಬಾನಿಗೆ `ಕ್ಲೀನ್ ಚಿಟ್~ ನೀಡಿದೆ ಎಂಬ ವರದಿಯನ್ನು ಸಿಬಿಐ ವಕ್ತಾರರು ತಳ್ಳಿಹಾಕಿದ್ದಾರೆ.
ನಾಗಾರ್ಜುನ ವಿರುದ್ಧ ಪ್ರಕರಣ
ಹೈದರಾಬಾದ್(ಐಎಎನ್ಎಸ್): ಪತ್ರಕರ್ತೆಯನ್ನು ನಿಂದಿಸಿ ಆಕೆಗೆ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ತೆಲುಗು ಚಿತ್ರ ನಟ ಅಕ್ಕಿನೇನಿ ನಾಗಾರ್ಜುನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.
ಹವ್ಯಾಸಿ ಪತ್ರಕರ್ತೆ ಸುನಿತಾ ತಾವು ಕೆಲ ತಿಂಗಳ ಹಿಂದೆ ನಾಗಾರ್ಜುನ ಬಗ್ಗೆ ಬರೆದ ಲೇಖನಕ್ಕೆ ಸಂಬಂಧಪಟ್ಟಂತೆ ಅನ್ನಪೂರ್ಣ ಸ್ಟುಡಿಯೊದಲ್ಲಿ ತಮ್ಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರೆಂದು ಪೊಲೀಸರಿಗೆ ದೂರು ನೀಡಿದ್ದಾರೆ.