ಬಳ್ಳಾರಿ: ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಧರ್ಮಾವರಂ ಬಳಿ ಗುರುವಾರ ಸಂಜೆ ಸಂಭವಿಸಿದೆ.
ಸಂಡೂರಿಗೆ ಆಗಮಿಸಿದ್ದ ಅನಿಲ್ ಲಾಡ್ ಸಂಜೆ ಇತರ ಮೂವರೊಂದಿಗೆ ಪ್ರಯಾಣ ಆರಂಭಿಸುತ್ತಿದ್ದಂತೆಯೇ ಹವಾಮಾನ ವೈಪರೀತ್ಯದಿಂದಾಗಿ ತೊಂದರೆ ಎದುರಾಯಿತು. ಈ ಸಂದರ್ಭ ಸ್ವತಃ ಲಾಡ್ ಹೆಲಿಕಾಪ್ಟರ್ ಇಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಪೈಲಟ್ ಧರ್ಮಾವರಂ ಬಳಿಯ ಗ್ರಾಮವೊಂದರ ಹತ್ತಿರ ತುರ್ತಾಗಿ ಕೆಳಕ್ಕಿಳಿಸಿದ ಎನ್ನಲಾಗಿದೆ.
ಈ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಲಿಕಾಪ್ಟರ್ ಕಂಡ ಗ್ರಾಮಸ್ಥರು ಸುತ್ತುವರಿದು, ಅನಿಲ್ ಲಾಡ್ ಆರೋಗ್ಯ ವಿಚಾರಿಸಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಲಾಡ್ ಬೆಂಗಳೂರಿಗೆ ತೆರಳಿದರು.