ಶಿರಾ: ಗೊಲ್ಲರ ಹಟ್ಟಿಗಳಲ್ಲಿ ಪರಿಶಿಷ್ಟ ಜನರನ್ನು ಬಿಟ್ಟುಕೊಳ್ಳದ ಪದ್ಧತಿ ಇದ್ದು, ಇದನ್ನು ಕೊನೆಗಾಣಿಸಬೇಕು ಎಂದು ಮಾಜಿ ಸಚಿವ ಎ.ಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬರಗೂರಿನಲ್ಲಿ ಭಾನುವಾರ ನಡೆದ ಹುಲಿಕುಂಟೆ ಹೋಬಳಿ ಮಟ್ಟದ ಯಾದವ ಜನಾಂಗದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೂಢ ನಂಬಿಕೆಗಳಿಂದ ಯಾದವ ಸಮಾಜದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಮೊದಲು ಯಾದವ ಸಮಾಜದ ಮಹಿಳೆಯರು ವಿದ್ಯಾವಂತರಾಗಬೇಕು ಎಂದರು.
ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಮಾಜಿ ಸಚಿವ ಬಿ.ಸತ್ಯನಾರಾಯಣ ಮಾತ ನಾಡಿ, ಸರ್ಕಾರ ಹಿಂದುಳಿದ ವರ್ಗಗಳ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಇದನ್ನು ಅರಿತು ಯಾದವ ಸಮಾಜ ಎಚ್ಚೆತ್ತು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಯಾದವ ಮಹಾ ಸಂಸ್ಥಾನದ ಕೃಷ್ಣ ಯಾದವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಯಾದವರ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಪರಸ್ಪರ ಕಾಲೆಳೆಯುವ ಪ್ರವೃತ್ತಿಯಿಂದ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಕೆ.ಬಡೀರಣ್ಣ, ವಿಶಾಲಕ್ಷಮ್ಮ, ಸಿ.ಆರ್.ಉಮೇಶ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಶ್ರೀನಿವಾಸಬಾಬು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ನಾಗಭೂಷಣ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜೇಶ್, ಪಿಎಸ್ಐ ಎಫ್.ಕೆ.ನದಾಫ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಣ್ಣ ಇದ್ದರು.