ಮುಂಡರಗಿ: `ಸದಾ ಪರೋಪಕಾರ, ಪರಚಿಂತನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರಿಗೆ ಪೂಜೆ ಪುನಸ್ಕಾರಗಳ ಹಂಗಿರುವುದಿಲ್ಲ. ಅಂತಹ ಮಹನು ಭಾವರು ಮಾತ್ರ ತಮ್ಮ ನಿಸ್ವಾರ್ಥ ಸೇವೆಯಿಂದ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನಕ್ಕಿಂತಲೂ ಹೆಚ್ಚು ಪುಣ್ಯ ಗಳಿಸಬಲ್ಲರು~ ಎಂದು ಹಾವೇರಿ ಕುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ ವದ ಅಂಗವಾಗಿ ಸೋಮವಾರ ರಾತ್ರಿ ಶ್ರಿಮಠದಲ್ಲಿ ಏರ್ಪಡಿಸಿದ್ದ `ಭಕ್ತ ಹಿತಚಿಂತನ ಗೋಷ್ಠಿ~ಯಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
`ದೇವರ ಹೆಸರಿನಲ್ಲಿ ಸಮಾಜದಲ್ಲಿ ಈಗಲೂ ಮನೆಮಾಡಿರುವ ತಲೆ ಬೋಳಿಸಿಕೊಳ್ಳುವಿಕೆ, ದೇವದಾಸಿ ಪದ್ಧತಿಯಂತಹ ಅನಿಷ್ಟ ಆಚರಣೆಗಳನ್ನು ಯಾವ ದೇವರೂ ಅಪೇಕ್ಷಿಸಲಾರ. ನೀಚ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅವೆಲ್ಲವುಗಳನ್ನು ಹುಟ್ಟು ಹಾಕಿದ್ದು, ಪ್ರಜ್ಞಾವಂತ ಜನರು ಅವುಗಳ ವಿರುದ್ಧ ಹೋರಾಡಿ, ಅವುಗಳನ್ನು ಬೇರು ಸಹಿತ ಕಿತ್ತೊಗೆಯಬೇಕು~ ಎಂದು ಅವರು ಸಲಹೆ ನೀಡಿದರು.
ಚಿಂತನೆ ಕೊರತೆಯಿಂದ ನಮ್ಮಲ್ಲಿ ಚಿಂತೆಗಳು ಹೆಚ್ಚಾಗಿ ಮಾನಸಿಕ ಕ್ಷೋಭೆ ಉಂಟಾಗ ತೊಡಗಿದೆ. ಕಲುಷಿತ ಗೊಂಡಿರುವ ಮನಸ್ಸನ್ನು ಶುದ್ಧಗೊಳಿಸಬೇಕಾಗಿದೆ~ ಎಂದು ಅಕ್ಕಿ ಆಲೂರಿನ ಶಿವಬಸವ ಸ್ವಾಮೀಜಿ ಸಲಹೆ ನೀಡಿದರು.
ಡಾ.ಅನ್ನದಾನೀಶ್ವರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಕೊಂಡಿದ್ದರು. ಕಲಕೇರಿ- ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಶಾಂತವೀರ ಸ್ವಾಮೀಜಿ, ಶಿವಶಾಂತವೀರ ಶರಣರು, ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಸಂಗಟಿ, ಶಂಶುದ್ದೀನ ಹಾರೋಗೆರಿ, ಮಲ್ಲಪ್ಪ ಸಂಗಟಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ವಚನ ಗೀತಗಾಯನ ನಡೆಯಿತು.