ಹೊಸನಗರ: ಹಳ್ಳಿಗಳಲ್ಲಿರುವ ಜೀವಂತ ಕಲೆ ಜಾನಪದವನ್ನು ಪಟ್ಟಣದ ಕಾನ್ವೆಂಟ್ ಸಂಸ್ಕೃತಿಯ ಮಕ್ಕಳಿಗೂ ತಲುಪಿಸುವ ಕಾರ್ಯ ಇಂದಿನ ಅಗತ್ಯ ಎಂದು ಹಿರಿಯ ಕಲಾವಿದ ರಾಮಮೂರ್ತಿರಾವ್ ಸಲಹೆ ನೀಡಿದರು.
ಶರಾವತಿ ರಾಷ್ಟ್ರೀಯ ಜಾನಪದ ಉತ್ಸವದ ಅಂಗವಾಗಿ ಭಾನುವಾರ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ನಡೆದ ವಿವಿಧ ರಾಜ್ಯಗಳ ಜಾನಪದ ಕಲೆ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನಪದೀಯ ಸಂಸ್ಕೃತಿಗಳು ರಾಜ್ಯ, ಪ್ರದೇಶ, ಸೀಮೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ವಿಭಿನ್ನವಾಗಿರುತ್ತದೆ. ಒಂದನ್ನೊಂದು ಅನುಕರಣೆ ಸಲ್ಲದು. ಸ್ವಂತಿಕೆ ಇರಲಿ ಎಂದು ಅವರು ಆಶಿಸಿದರು.
ರಾಮಕೃಷ್ಣ ವಿದ್ಯಾಲಯದ ಆಡಳಿತಾಧಿಕಾರಿ ಸುಧಾಕರ್ ಅಂತಿಮ ದಿನದ ವಿಚಾರ ಸಂಕಿರಣ ಉದ್ಘಾಟಿಸಿದರು.
ಕಲಾತೀರ ಸಂಸ್ಥೆಯ ಸಂಚಾಲಕ ಉದಯಕುಮಾರ್ ಶೆಟ್ಟಿ, ವಿಮರ್ಶಕ ಕೃಷ್ಣಮೂರ್ತಿ, ಶರಾವತಿ ಉತ್ಸವದ ಸಂಚಾಲಕ ಬಿ.ಎಸ್. ಸುರೇಶ್, ಪ.ಪಂ.ಮಾಜಿ ಅಧ್ಯಕ್ಷ ಡಿ.ಎಂ. ರತ್ನಾಕರ ಶೆಟ್ಟಿ. ಕಿರುತೆರೆ ನಟ ಜಯರಾಮ್ ಹಾಜರಿದ್ದರು.
ಶಿಕ್ಷಕ ರವಿ ಸ್ವಾಗತಿಸಿದರು. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು. ವಿಕಾಸ್ ವಂದಿಸಿದರು.
ಪ್ರಾತ್ಯಕ್ಷಿಕೆ: ತಮಿಳುನಾಡಿನ ಕರಗಟ್ಟಂ, ಅಸ್ಸಾಮಿನ ಜುಮ್ಮಾರ ಮತ್ತು ದಾಲ್ಬಾಂಡಾ ನೃತ್ಯ, ಹೈದಾರಾಬಾದಿನ ಲಂಬಾಡಿ ನೃತ್ಯ, ಕರ್ನಾಟಕದ ತಮಟೆ, ಪಟಕುಣಿತಗಳ ಪ್ರಾತ್ಯಕ್ಷಿಕೆ ನಡೆಯಿತು.