ಹುಣಸೂರು: ಪಟ್ಟಣದ ಮುನೇಶ್ವರ ಕಾವಲ್ ಮೈದಾನವನ್ನು ಕ್ರೀಡಾ ಚಟುವಟಿಕೆಗೆ ಮೀಸಲಿಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ನೀಡಿದ್ದ ಆದೇಶವನ್ನು ಹುಣಸೂರು ಪುರಸಭೆ ಗಾಳಿಗೆ ತೂರಿ ಮನರಂಜನಾ ಆಟಿಕೆ ಗಳಿಗೆ ಅನುಮತಿ ನೀಡಿದೆ.
ಈ ಹಿಂದೆ ಲೋಕಾಯುಕ್ತ ನ್ಯಾಯ ಮೂರ್ತಿಗಳಾಗಿ ಕಾರ್ಯ ನಿರ್ವಹಿಸು ತ್ತಿದ್ದ ನ್ಯಾ.ವೆಂಕಟಾಚಲಯ್ಯ ಅವರ ಅಧಿಕೃತ ಭೇಟಿ ಸಮಯದಲ್ಲಿ, ಪಟ್ಟ ಣದ ಕ್ರೀಡಾ ಪ್ರೇಮಿಗಳು ಪುರಸಭೆ ವಿರುದ್ಧ ದೂರು ನೀಡಿ, ಕ್ರೀಡಾ ಮೈದಾನವನ್ನು ಕ್ರೀಡೆಗೆ ಮೀಸಲಿಡದೆ ವಿವಿಧ ಮನರಂಜನೆಗಳಿಗೆ ನೆಲ ಬಾಡಿಗೆ ನಿಗದಿಗೊಳಿಸಿ ಬಾಡಿಗೆ ನೀಡಿ ಕ್ರೀಡೆಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಮನವಿ ಮಾಡಿದ್ದರು.
ನ್ಯಾ.ವೆಂಕಟಾಚಲಯ್ಯ ಅವರು ಕ್ರೀಡಾಪಟುಗಳ ಮನವಿಗೆ ಸ್ಪಂದಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಆದೇಶಿಸಿ ಮೈದಾನವನ್ನು ಕ್ರೀಡೆಗೆ ಹೊರತು ಪಡಿಸಿ ಯಾವುದೇ ಮನ ರಂಜನೆಗಳಿಗೆ ನೆಲ ಬಾಡಿಗೆಗೆ ನೀಡದಂತೆ ಲಿಖಿತ ಆದೇಶ ನೀಡಿದ್ದಾರೆ ಎಂದು ಫುಟ್ಬಾಲ್ ಕ್ರೀಡಾಪಟುಗಳಾದ ಪ್ರಕಾಶ್ (ಸಚಿನ್), ರಮೇಶ್, ಮಂಜುನಾಥ್ ದೂರಿದ್ದಾರೆ.
ಅನುಮತಿ ಇಲ್ಲ: ಈ ಸಂಬಂಧ ಹುಣಸೂರು ಪುರಸಭೆ ಮುಖ್ಯಾಧಿಕಾರಿ ಹರೀಶ್ ಮಾತನಾಡಿ, ಮುನೇಶ್ವರ ಮೈದಾನದಲ್ಲಿ ಮನರಂಜನೆ ಆಟಿಕೆ ಘಟಕ ತೆರೆಯಲು ಅಧಿಕೃತ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮೈದಾನದ ಸುತ್ತಲಿನ ನಿವಾಸಿಗರ ಮತ್ತು ಕ್ರೀಡಾಪಟುಗಳ ಹಿತದೃಷ್ಟಿ ಯಿಂದ ಮೈದಾನದಲ್ಲಿ ಈ ರೀತಿ ಮನರಂಜನೆ ಆಟಿಕೆಗಳಿಗೆ ಅನುಮತಿ ನೀಡಿಲ್ಲ.
ಕಳೆದ ವರ್ಷವೂ ಇದೇ ರೀತಿ ಆಟಿಕೆ ಘಟಕದ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದರೂ ಮನವಿಯನ್ನು ತಿರಸ್ಕರಿಸಲಾಗಿತ್ತು. ಈ ಬಾರಿ ಗಮನಕ್ಕೆ ಬಾರದೆ ಮನರಂಜನಾ ಘಟಕ ತಲೆ ಎತ್ತಿದೆ. ತಡೆಹಿಡಿಯುವುದಾಗಿ ತಿಳಿಸಿದರು.
ಪೊಲೀಸ್ ಪರವಾನಗಿ ಯನ್ನು ಮನ ರಂಜನಾ ಘಟಕದ ವ್ಯವಸ್ಥಾಪಕರು ಪಡೆದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಆಟಿಕೆ ಘಟಕ ಆರಂಭಿಸು ತ್ತಿರುವ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದೆ.