ನವದೆಹಲಿ(ಪಿಟಿಐ): ವಾಯು ಸಂಚಾರ ನಿಯಂತ್ರಣ(ಎಟಿಸಿ) ಅನುಮತಿ ಪಡೆಯದೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ವಿಮಾನವನ್ನು ಇಳಿಸಿದ್ದ ತಪ್ಪಿಗಾಗಿ ಇಬ್ಬರು ಪೈಲಟ್ಗಳನ್ನು ಏರ್ ಇಂಡಿಯಾ ಸಂಸ್ಥೆಯು ಅಮಾನತು ಮಾಡಿದೆ.
ಅಬುಧಾಬಿಯಿಂದ ಹೊರಟ ವಿಮಾನವು ವಾಯು ಸಂಚಾರ ನಿಯಂತ್ರಣ(ಎಟಿಸಿ) ಅನುಮತಿ ಪಡೆಯದೆ ಶುಕ್ರವಾರ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಅಲ್ಲದೆ ಭೂಮಿಯಿಂದ 60 ನಾಟಿಕಲ್ ಮೈಲ್ ದೂರದಲ್ಲಿರುವಾಗಲೇ ವಿಮಾನದ ಸಂವಹನ ಕಂಪನಾಂಕವನ್ನು (ಫ್ರೀಕ್ವೆನ್ಸಿ) ಬದಲಿಸಿಕೊಂಡಿತ್ತು. ಇದು ವಿಮಾನಯಾನ ನಿಯಮದ ಉಲ್ಲಂಘನೆ ಎನ್ನುವ ಆರೋಪದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.
`ಏರ್ ಇಂಡಿಯಾ ವ್ಯವಸ್ಥಾಪನ ಮಂಡಳಿಯು ಪೈಲಟ್ ಮತ್ತು ಸಹ ಪೈಲಟ್ ಅನ್ನು ಅಮಾನತುಗೊಳಿಸಿದೆ. ಅವರಿಬ್ಬರು ದೋಷಮುಕ್ತರಾಗುವವರೆಗೆ ಮತ್ತೆ ವಿಮಾನ ಚಲಾಯಿಸುವಂತಿಲ್ಲ. ಪ್ರಕರಣದಲ್ಲಿ ಅವರು ತಪ್ಪಿತಸ್ಥರು ಎಂದು ತಿಳಿದು ಬಂದಲ್ಲಿ ಅವರ ಮೇಲೆ ಕ್ರಮ ಜರುಗಿಸಲಾಗುವುದು' ಎಂದು ಏರ್ ಇಂಡಿಯಾ ತಿಳಿಸಿದೆ.