ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮಾನ ಎಂಬ ಪ್ರತಿಬಿಂಬ

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಷ್ಟಪಟ್ಟು ಕಾರ್ಯ ನಿರ್ವಹಿಸುತ್ತಿರುತ್ತೀರಿ. ಮೇಲಧಿಕಾರಿಯ ಬಳಿ ಹೋಗಿ ಬಡ್ತಿ ಕೇಳಬೇಕು. ಅವರು ಇಲ್ಲ ಎಂದರೆ ಎಂದು ಅನುಮಾನ. ನಿಮಗೆ ವ್ಯವಹಾರದಲ್ಲಿ ಸಾಕಷ್ಟು ಅನುಭವ ದೊರಕಿದೆ. ಸ್ವಂತ ಉದ್ಯೋಗ ಮಾಡಲು ಹಣ ಬೇಕು. ತಂದೆಯನ್ನು ಕೇಳಬೇಕು. ಅವರು ಕೊಡದಿದ್ದರೆ ಎಂಬ ಅನುಮಾನ ಕಾಡುತ್ತದೆ.

ಐದು ವರ್ಷಗಳಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೀರಿ. ಮದುವೆಯಾಗುವ ನಿರ್ಧಾರವನ್ನೂ ಮಾಡಿದ್ದೀರಿ. ಅವಳ ತಂದೆಯ ಹತ್ತಿರ ಹೋಗಿ ವಿಷಯ ತಿಳಿಸಬೇಕು. ಅವರು ಒಪ್ಪದಿದ್ದರೆ ಎಂದು ಅನುಮಾನಿಸುತ್ತೀರಿ. ಹೀಗೆ ಪ್ರತಿ ಹೆಜ್ಜೆಯಲ್ಲೂ ಅನುಮಾನ ನಿಮ್ಮನ್ನು ಕಾಡುತ್ತದೆ.

ಯಾವುದೋ ಸಂದರ್ಶನಕ್ಕೆ ಹೋಗುತ್ತೀರಿ. ಒಂದು ಪ್ರಶ್ನೆ ಕೇಳುತ್ತಾರೆ. ನಿಮಗೆ ಉತ್ತರ ಗೊತ್ತಿರುವುದಿಲ್ಲ. ಆದರೆ ಹ್ಞೂಂ... ಎಂದು ರಾಗ ಎಳೆದು, ನಂತರ `ಗೊತ್ತಿಲ್ಲ' ಎನ್ನುತ್ತೀರಿ. ನಿಮಗೆ ಉತ್ತರ ಗೊತ್ತಿರದ ಪ್ರಶ್ನೆಯನ್ನೇ ಅವರು ಕೇಳಿರುತ್ತಾರೆ. ಸಂದರ್ಶಕರಿಗೆ ಬೇಕಾಗಿರುವುದು ಆ ಪ್ರಶ್ನೆಗೆ ಉತ್ತರವಲ್ಲ. ಆದರೆ ಎಷ್ಟು ಆತ್ಮವಿಶ್ವಾಸದಿಂದ ನೀವು `ಗೊತ್ತಿಲ್ಲ' ಎಂದು ಹೇಳುತ್ತೀರಿ ಎಂದು ಪರೀಕ್ಷಿಸಲು ಕೇಳಿದ ಪ್ರಶ್ನೆ ಅದಾಗಿರುತ್ತದೆ. ಆದರೆ `ಗೊತ್ತಿಲ್ಲ' ಎಂದು ಹೇಳಲು ಸಹ ಅನುಮಾನಿಸುತ್ತೀರಿ.

ಅನಾರೋಗ್ಯವೆಂದು ಡಾಕ್ಟರ್ ಬಳಿ ಹೋಗುತ್ತೀರಿ. ತೀರಾ ಪರಿಚಿತ ಡಾಕ್ಟರಾದ್ದರಿಂದ `ಅನವಶ್ಯಕವಾಗಿ ಔಷಧ ಬೇಡ. ದಿನಾ ನಾಲ್ಕು ಲೋಟ ಬಿಸಿ ನೀರು ಕುಡಿದರೆ ಸಾಕು' ಎನ್ನುತ್ತಾರೆ. ಆದರೆ ಡಾಕ್ಟರರಿಗೆ ಇರುವ ನಂಬಿಕೆಯ ಮೇಲೆ ನಿಮಗೆ ಅನುಮಾನ. ಬಿಸಿ ನೀರಿನಿಂದ ಕಾಯಿಲೆ ವಾಸಿ ಆಗುತ್ತದಾ ಎಂದು ಯೋಚಿಸುತ್ತೀರಿ.

ನಮಗೆ ಎಲ್ಲದರ ಮೇಲೂ ಅನುಮಾನ. ನಮ್ಮ ಮೇಲೆ ನಮಗಿರುವ ಇಂತಹ ಅನುಮಾನವೇ ಪ್ರಪಂಚದ ಮೇಲಿನ ಅನುಮಾನದ ಪ್ರತಿಬಿಂಬವಾಗಿ ಈಗ ನಮ್ಮೆದುರು ನಿಂತಿದೆ. ನಾವು ಅದರಿಂದ ಹೊರಬರಲು ಸಿದ್ಧರಾಗಿಲ್ಲ.

                                                                          * * *

ಕೆಲವರಿಗೆ ಜೀವನದಲ್ಲಿ ಯಶಸ್ಸು ಗಳಿಸಲು ಇಷ್ಟವಿಲ್ಲ. ಈ ಪ್ರಯತ್ನದಲ್ಲಿ ಸೋತರೆ ಎನ್ನುವ ಭಯವೇ ಇದಕ್ಕೆ ಕಾರಣ. ಇನ್ನು ಕೆಲವರಿಗೆ  ಯಶಸ್ಸು ಗಳಿಸಿದರೆ ತಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ, ಆಗ ಇತರರು ತಮ್ಮಿಂದ ಹಣದ ಸಹಾಯ ನಿರೀಕ್ಷಿಸುತ್ತಾರೆ ಎಂಬ ಭಯ.
ಕೆಲವರು ಕಾರ್ಯಾಗಾರಗಳಲ್ಲಿ, ತರಗತಿಗಳಲ್ಲಿ ಕೇಳಿದ್ದೆಲ್ಲವನ್ನೂ ಬರೆದುಕೊಳ್ಳುತ್ತಾರೆ.

ಆಮೇಲೆ ಅದನ್ನೆಲ್ಲ ಏನು ಮಾಡುತ್ತಾರೆ? ಎಲ್ಲೋ ಬಿಸಾಕಿದ್ದು, ಮನೆ ಬದಲಾಯಿಸುವಾಗ ಸಿಗುತ್ತದೆ. ಆಗ ಅದನ್ನು ನೋಡಿ ನಕ್ಕು, ರದ್ದಿಗೆ ಹಾಕುತ್ತಾರೆ. ಹಾಗಾದರೆ ಅಷ್ಟೆಲ್ಲ ಶ್ರಮ ವಹಿಸಿ ಬರೆದುಕೊಂಡದ್ದು ಯಾತಕ್ಕೆ? ಪುಟಗಟ್ಟಲೆ ಬರೆದುಕೊಂಡು ಯಾವುದನ್ನೂ ಅಳವಡಿಸಿಕೊಳ್ಳದೇ ಇರುವುದಕ್ಕಿಂತ, ಕೇಳಿಸಿಕೊಂಡಿದ್ದರಲ್ಲಿ ಒಂದಂಶವನ್ನು ಅಳವಡಿಸಿಕೊಂಡರೂ ಸಾಕು, ಜೀವನದಲ್ಲಿ ಎಷ್ಟೋ ಮೇಲಕ್ಕೆ ಏರಬಹುದು.

                                                                          * * *

ಎಷ್ಟೋ ಬಾರಿ ನಾವು ಸರಿ ಎನಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಯಾಕೆಂದರೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡವರು ಜೀವನದಲ್ಲಿ ಕಷ್ಟಗಳನ್ನೇ ಅನುಭವಿಸಿರುವುದನ್ನು ಕಾಣುತ್ತೇವೆ. ಉದಾ: ಶ್ರೀರಾಮಚಂದ್ರ ರಾಜ್ಯಾಭಿಷೇಕದಿಂದ ವಂಚಿತನಾಗಿ 14 ವರ್ಷ ವನವಾಸದಲ್ಲಿದ್ದು ಅನೇಕ ಸಂಕಷ್ಟಗಳನ್ನು ಎದುರಿಸಿದ.

ಅದೇ ರೀತಿ ಸತ್ಯ ಹರಿಶ್ಚಂದ್ರ ಸತ್ಯವನ್ನೇ ನುಡಿಯುತ್ತೇನೆಂದು ಪ್ರತಿಜ್ಞೆ ಮಾಡಿದ್ದರಿಂದ, ರಾಜ್ಯವನ್ನು ಮಾತ್ರವಲ್ಲ ಹೆಂಡತಿ, ಮಗನನ್ನೂ ದೂರ ಮಾಡಿಕೊಳ್ಳಬೇಕಾಯಿತು. ಇಂತಹ ಎಷ್ಟೋ ಮಹಾನ್ ಪುರುಷರನ್ನು ಗಮನಿಸಿದಾಗ, ಅವರ ಜೀವನ ಬಹಳ ಕಷ್ಟಕರವಾಗಿರುವುದು ಕಂಡುಬರುತ್ತದೆ. ಟಿ.ವಿ. ಧಾರಾವಾಹಿಗಳಲ್ಲೂ ಒಳ್ಳೆಯ ಪಾತ್ರಧಾರಿಗಳು ಅಳುತ್ತಾ ಇರುತ್ತಾರೆ. ಆದರೆ ಖಳನಾಯಕರು ಮಾತ್ರ ಕುಡಿಯುತ್ತಾ, ಕುಣಿಯುತ್ತಾ ಖುಷಿಯಿಂದ ಇರುತ್ತಾರೆ.

ಪತ್ರಿಕೆಗಳಲ್ಲೂ ನಕಾರಾತ್ಮಕ ವಿಷಯಗಳೇ ಹೆಚ್ಚಾಗಿರುತ್ತವೆ. ಹೀಗಾಗಿ ತಪ್ಪು ಮಾಡಿದವರೇ ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತಿರುತ್ತಾರೆ. ಸರಿಯಾದ ದಾರಿಯಲ್ಲಿ ಹೋದಾಗ ಖಂಡಿತಾ ಜಯ ಸಿಗುತ್ತದೆ. ಸ್ಪಲ್ಪ ತಡವಾದರೂ ಅದರಿಂದ ನೆಮ್ಮದಿ ಇರುತ್ತದೆ. ತಪ್ಪು ಮಾಡಿದಾಗ ಜಯ ಸಿಕ್ಕರೂ ನೆಮ್ಮದಿ ಇರುವುದಿಲ್ಲ. `ಸತ್ಯಮೇವ ಜಯತೇ' ಎನ್ನುವ ಮಾತಿನಂತೆ ಸತ್ಯಕ್ಕೆ ಎಂದೂ ಜಯ ಶತಃಸಿದ್ಧ.

ನಮ್ಮ ವಿಜಯದ ವೇಗವು, ನಾವು ತೆಗೆದುಕೊಳ್ಳುವ ಕಠಿಣವಾದ ನಿರ್ಧಾರಗಳನ್ನು, ಅದನ್ನು ಅಳವಡಿಸಿಕೊಳ್ಳುವ ವೇಗವನ್ನು ಅವಲಂಬಿಸಿರುತ್ತದೆ. ನಕಾರಾತ್ಮಕವಾದ ಎಲ್ಲ ವಿಷಯಗಳನ್ನೂ, ಅಂದರೆ ಸ್ನೇಹಿತರು, ಸಂಬಂಧಿಕರು, ಟಿ.ವಿ. ಧಾರಾವಾಹಿ, ಸಿನಿಮಾ, ಪತ್ರಿಕಾ ಲೇಖನ, ಮಾತು ಎಲ್ಲವನ್ನೂ ತ್ಯಜಿಸುವ ನಿರ್ಧಾರ ಮಾಡಬೇಕು.

ಏಕೆಂದರೆ ನಾವು ಸೋತಾಗ ಈ ನಕಾರಾತ್ಮಕ ವಿಷಯಗಳು ಖಂಡಿತಾ ನಮ್ಮ ಸಹಾಯಕ್ಕೆ ಬರುವುದಿಲ್ಲ. ಜೀವನದಲ್ಲಿ ಅಭಿವೃದ್ಧಿ ಹೊಂದಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದಷ್ಟೇ ಮುಖ್ಯವಲ್ಲ, ಅವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ನಾವು ಸಹ ಹುಟ್ಟಿನಿಂದ ಪ್ರಾಣಿಗಳೇ. ನಂತರ ತರಬೇತಿ ಹೊಂದಿ ಮನುಷ್ಯರಾಗಿದ್ದೇವೆ.

ಮನುಷ್ಯನನ್ನು ಯಾವುದರಲ್ಲಾದರೂ ಮತ್ತು ಎಲ್ಲದರಲ್ಲೂ ತರಬೇತುಗೊಳಿಸಬಹುದು. ತರಬೇತಿಯಿಂದ ನಕಾರಾತ್ಮಕ ವಿಷಯಗಳನ್ನು ಬಿಟ್ಟು ಸಕಾರಾತ್ಮಕ ವಿಷಯಗಳ ಕಡೆಗೆ ತಿರುಗಿಸಬಹುದು. ಬೇಗ ಏಳುವಂತೆ ತರಬೇತುಗೊಳಿಸಬಹುದು. ಧೂಮಪಾನ, ಕುಡಿತ, ಜರ್ದಾ ಚಟವನ್ನು ಬಿಡಿಸಬಹುದು. ನಮ್ಮನ್ನು ನಾವೇ ತರಬೇತುಗೊಳಿಸಿಕೊಳ್ಳಲು ಸಾಧ್ಯವಿದೆ.

ಆದರೆ ನಮಗೆ ನಮ್ಮಲ್ಲಿ ನಂಬಿಕೆ ಇಲ್ಲ. ಸೈನಿಕರ ಶಿಸ್ತನ್ನು ನಾವೆಲ್ಲ ನೋಡಿದ್ದೇವೆ. ಈ ರೀತಿ ಶಿಸ್ತಿನಿಂದ ವರ್ತಿಸಲು ಅವರಿಗೆ ಕೊಡುವ ಮೊದಲ ತರಬೇತಿ ಎಂದರೆ, ನಿರ್ದಿಷ್ಟ ಕಚೇರಿಯ ಗೇಟಿನ ಮುಂಭಾಗದಲ್ಲಿ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಿಲ್ಲುವುದು. ಯಾವುದೇ ಕಾರಣಕ್ಕೂ ಅವರು ತಮ್ಮ ಸ್ಥಳ ಬಿಟ್ಟು ಕದಲುವಂತಿಲ್ಲ.

ಹೀಗೆ ದೇಹವನ್ನು ದಂಡಿಸಿದಾಗ ಅದು ಮುಂದೆ ಎಂತಹ ಕಠಿಣ ಶಿಕ್ಷೆಯನ್ನು ಬೇಕಾದರೂ ಸಹಿಸುತ್ತದೆ. ಮೊದಲು ಶರೀರವನ್ನು ಹಿಡಿತಕ್ಕೆ ತಂದುಕೊಂಡು, ನಂತರ ಮನಸ್ಸನ್ನು ನಿಯಂತ್ರಣಕ್ಕೆ ತರಲಾಗುತ್ತದೆ. ಇದರಿಂದ ಅವರು ಶತ್ರುಗಳ ಕೈಗೆ ಸಿಕ್ಕಿಬಿದ್ದಾಗ ಎಂತಹ ಕಠಿಣ ಶಿಕ್ಷೆಯನ್ನು ನೀಡಿದರೂ ತಮ್ಮ ದೇಶದ ಗುಟ್ಟು ಬಿಟ್ಟುಕೊಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT