ನವದೆಹಲಿ: ಮಧ್ಯಪ್ರದೇಶದಲ್ಲಿನ ರಿಲ ಯನ್ಸ್ ಪವರ್ ಒಡೆತನದ ಎರಡು ವಿದ್ಯುತ್ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯ ಕಾನೂನು ಬಾಹಿರವಾಗಿ ಲಾಭ ಮಾಡಿಕೊಟ್ಟಿರುವ ವಿಷಯವನ್ನು ಮಹಾಲೇಖಪಾಲರ (ಸಿಎಜಿ) ವರದಿ ಪತ್ತೆ ಹಚ್ಚಿದೆ.
ಈ ಎರಡೂ ಯೋಜನೆಗಳಿಗೆ ಅಕ್ರಮವಾಗಿ ಅನುಮತಿ ನೀಡಿರುವ ವಿವಾದ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಜೈರಾಂ ರಮೇಶ್ ಅವರನ್ನುಸುತ್ತಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಏ. 2009ರಲ್ಲಿ ಈ ಪ್ರಕ್ರಿಯೆ ಶುರುವಾದಾಗ ಸಿಂಗ್ ಅವರು ಪರಿಸರ ಖಾತೆಯನ್ನೂ ನೋಡಿಕೊಳ್ಳುತ್ತಿದ್ದರು. 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಎರಡನೇ ಯೋಜನೆಗೆ ಅನುಮತಿ ನೀಡುವಾಗ ಜೈರಾಂ ರಮೇಶ್ ಅವರು ಈ ಖಾತೆಯ ಹೊಣೆ ಹೊತ್ತಿದ್ದರು ಎಂಬ ಅಂಶವನ್ನು ಸಿಎಜಿ ಬಯಲಿಗೆ ಎಳೆದಿದೆ.
ಮಧ್ಯಪ್ರದೇಶದಲ್ಲಿ ರಿಲಯನ್ಸ್ ಪಾವರ್ ಒಡೆತನಕ್ಕೆ ಸೇರಿದ ಸಸಾನ್ ಪವರ್ ಲಿಮಿಟೆಡ್ಗೆ (ಎಸ್ಪಿಎಲ್) 4 ಸಾವಿರ ಮೆಗಾ ವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆಗೆ ಅಕ್ರಮವಾಗಿ ಭೂಮಿ ಸೇರಿದಂತೆ ಇನ್ನಿತರ ಅನುಕೂಲತೆಗಳನ್ನು ಪರಿಸರ ಸಚಿವಾಲಯದ ಕಲ್ಪಿಸಿಕೊಟ್ಟಿತ್ತು ಎಂದು ಸಿಎಜಿ ಹೇಳಿದೆ. ಎಸ್ಪಿಎಲ್ಗೆ ಅನುಕೂಲತೆ ಕಲ್ಪಿಸಿಕೊಡುವ ಉದ್ದೇಶದಿಂದ ಅರಣ್ಯ ಸಂರಕ್ಷಣಾ ಕಾನೂನು ಮತ್ತು ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.