ಹೊನ್ನಾಳಿ: `ಅನ್ನಭಾಗ್ಯ' ಯೋಜನೆ ಯಡಿ ವಿತರಿಸಿದ ಅಕ್ಕಿ ಮಾರಾಟ ಮಾಡಬಾರದು ಎಂದು ಶಾಸಕ ಡಿ.ಜಿ.ಶಾಂತನಗೌಡ ವಿನಂತಿಸಿದರು.
ಪಟ್ಟಣದಲ್ಲಿ ಬುಧವಾರ `ಅನ್ನಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಬೆಲೆ ಅಂಗಡಿಗಳಿಂದ ಪಡೆದ ಅಕ್ಕಿಯನ್ನು ಫಲಾನುಭವಿಗಳು ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಯೋಜನೆಯ ಸೌಲಭ್ಯ ದುರುಪಯೋಗ ಆಗಬಾರದು ಎಂದರು.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಂದೇ ರೂ.1ಕ್ಕೆ 1ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ಪ್ರಾರಂಭಿಸಿದರು. ಅಕ್ಕಿ ಸಕಾಲಕ್ಕೆ ಲಭಿಸದ ಕಾರಣ ಕೊಂಚ ತಡವಾಗಿದೆ. ಆದರೂ, ಘೋಷಿಸಿದ ಯೋಜನೆ ಶೀಘ್ರವೇ ಅನುಷ್ಠಾನಗೊಳಿಸಿದ ಏಕೈಕ ಸರ್ಕಾರ ನಮ್ಮದು ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯೆ ಎಂ.ಎಸ್.ಭಾರತೀ ಚಂದ್ರಶೇಖರ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಬಡವರಿಗೆ ಅನ್ಯಾಯ ಆಗದಂತೆ ಪಡಿತರ ಆಹಾರ ಧಾನ್ಯ ವಿತರಿಸಬೇಕು. ಜನಪ್ರತಿನಿಧಿಗಳು -ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯ ಹೊಸಕೇರಿ ಸುರೇಶ್ ಮಾತನಾಡಿ, ಒಂದು ಪ್ರದೇಶದ ಪಡಿತರ ಕಾರ್ಡ್ ಗಳಿಗೆ ಬೇರೆ ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ವಿತರಿಸುವುದರಿಂದ ಜನತೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮುಖಂಡರಾದ ಬಿ.ಸಿದ್ದಪ್ಪ, ಜಿ.ಪಿ.ವರದರಾಜಪ್ಪ, ಜಿ.ಪಂ. ಸದಸ್ಯ ಕೆ.ಎಚ್.ಗುರುಮೂರ್ತಿ, ತಾ.ಪಂ. ಸದಸ್ಯ ಬಿ.ಜಿ.ಕಾಂತರಾಜ್ ಮಾತನಾಡಿದರು.
ಬಿ.ಎಂ.ಶಿವಲಿಂಗಯ್ಯ, ಕೆ.ವಿ.ಚನ್ನಪ್ಪ, ಡಾ.ಎಲ್.ಈಶ್ವರಾನಾಯ್ಕ, ಎಚ್.ಎ.ಉಮಾಪತಿ, ವಿಠಲನಾಯ್ಕ, ಜಿಲ್ಲಾ, ತಾಲ್ಲೂಕು, ಪಟ್ಟಣ ಪಂಚಾಯ್ತಿ ಸದಸ್ಯರು ಇದ್ದರು.
ದೀಪಿಕಾ, ಕಾವ್ಯಾ ಸಂಗಡಿಗರು ಪ್ರಾರ್ಥಿಸಿದರು. ಹುಲಿರಾಜ್ ಸ್ವಾಗತಿಸಿದರು. ಟಿ.ವಿ.ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ನ್ಯಾಮತಿ ನಾಗರಾಜ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.