ಮೈಸೂರು: ಮೈಸೂರು ತಾಲ್ಲೂಕು ವರುಣಾ ಹೋಬಳಿ ಸಿದ್ದರಾಮನಹುಂಡಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಶೌಚಾಲಯ ಸ್ವಚ್ಛತೆ ಹಾಗೂ ಕಸಗುಡಿಸುವ ಕೆಲಸಕ್ಕೆ ಬಳಸಲಾಗುತ್ತಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಎನ್.ಮಹೇಂದ್ರ ತಿಳಿಸಿದ್ದಾರೆ.
ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅವರು, ಶಾಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪತ್ರಿಕೆಗಳಿಗೆ ಈ ಕುರಿತು ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ವರುಣಾ ಹೋಬಳಿಯಲ್ಲೇ ಇದು ಅತ್ಯುತ್ತಮ ಶಾಲೆಯಾಗಿದೆ. ಶಾಲೆಯ ಶಿಕ್ಷಕರು, ಬಿಸಿಯೂಟದ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.