ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ರಸ್ತೆ ಬಳಿ ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ರೋಡ್ ರೋಲರ್ ಹರಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಸಾವಿಗೀಡಾದರೆ, ತೀವ್ರವಾಗಿ ಗಾಯಗೊಂಡಿದ್ದ ಇನ್ನೊಬ್ಬ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ. ತೀವ್ರ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಮೈಸೂರು ಜಿಲ್ಲೆಯ ಎಚ್. ಡಿ.ಕೋಟೆ ತಾಲ್ಲೂಕಿನ ಹಾಕತ್ತೂರಿನ ನಿವಾಸಿಗಳಾದ ಪುಟ್ಟನಾಯಕ (45), ಮರಿಗೌಡ (40) ಸ್ಥಳದಲ್ಲಿಯೇ ಅಸುನೀಗಿದರೆ, ಇದೇ ಗ್ರಾಮದ ರಾಮ ನಾಯಕ (45) ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇನ್ನುಳಿದಂತೆ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾಗಿದ್ದು, ನಾಲ್ಕು ಜನರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಮಧ್ಯರಾತ್ರಿ ಲಾರಿಯು ಇಳಿಜಾರಿನಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಿತು. ಈ ರಭಸಕ್ಕೆ ರೋಡ್ ರೋಲರ್ ಕಳಚಿಕೊಂಡು ಹಿಮ್ಮುಖವಾಗಿ ಚಲಿಸಿ ಕಾರ್ಮಿಕರ ಮೇಲೆ ಹರಿದು, ಹಳ್ಳಕ್ಕೆ ಬಿದ್ದಿತು. ರೋಡ್ ರೋಲರ್ ಚಕ್ರದಡಿ ಸಿಲುಕಿದ ಮೂವರು ಅಸುನೀಗಿದರು.