ನಾಗಮಂಗಲ: ಕ್ಯಾಂಟರ್ ವಾಹನವು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 11 ತಿಂಗಳ ಹೆಣ್ಣು ಮಗು ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ತಾಲ್ಲೂಕಿನ ಗಡಿಭಾಗ ಖರಡ್ಯ ಬಳಿ ಭಾನುವಾರ ಸಂಜೆ ನಡೆದಿದೆ.
ಮೈಸೂರಿನ ಅರವಿಂದ ನಗರ ವಾಸಿಗಳಾದ ಎಚ್.ಎಸ್.ಪುರುಷೋತ್ತಮ್ (38), ಇವರ ಪತ್ನಿ ಬಿ.ಶ್ಯಾಮಲಾ (31), ಸಹೋದರ ಎಚ್.ಎಸ್. ಶ್ರೀಧರ್(31) ಹಾಗೂ ಮತ್ತೊಬ್ಬ ಸಹೋದರ ರಘು ಅವರ 11 ತಿಂಗಳ ಪುತ್ರಿ ಚಾರ್ವಿಕಾ ಮೃತಪಟ್ಟವರು.
ಘಟನೆಯಲ್ಲಿ ರಘು ಅವರ ಪತ್ನಿ ಸುನಿತಾ ಹಾಗೂ ಶ್ರೀಧರ್ ಅವರ ಪತ್ನಿ ನವ್ಯ ಹಾಗೂ ಪುರುಷೋತ್ತಮ ಅವರ ಪುತ್ರ ಎಂಟು ವರ್ಷದ ಪ್ರೀತಂ, ಪುತ್ರಿ ಪಿಂಕು ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಬಿ.ಜಿ.ಎಸ್ ಅಪೊಲೊ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಇವರೆಲ್ಲ ಶ್ರೀಧರ್ ಅವರ ಮಗಳು ರಚಿತಾಳಿಗೆ ಮುಡಿ ಹರಕೆ ತೀರಿಸಲು ಆದಿ ಚುಂಚನಗಿರಿಗೆ ತೆರಳಿದ್ದರು. ಅಲ್ಲಿಂದ ಕೊಂಡು ವಾಪಸ್ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.