ಶಿರಾ: ನಗರದ ಬಳಿ ರಾಷ್ಟ್ರೀಯ ಹೆದ್ದಾರಿ-4ರ ಬೈಪಾಸ್ನಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ತೆಲುಗು ಚಿತ್ರರಂಗದ ಯುವ ನಟ ಭರತ್ (25) ಹಾಗೂ ಚಾಲಕ ವಿಶ್ವನಾಥ ರೆಡ್ಡಿ (23) ಸಾವನ್ನಪ್ಪಿದ್ದಾರೆ. ಭರತ್ ಸ್ನೇಹಿತ ಲೋಕೇಶ್ ಗಾಯಗೊಂಡಿದ್ದಾರೆ.
ಇವರು ಮುಂಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ರಸ್ತೆಯ ಎಡ ಭಾಗದ ಸೇತುವೆಗೆ ರಭಸವಾಗಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಕಾರಿನ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ಲೋಕೇಶ್ (24) ಬಲಗಾಲು ಮುರಿದಿದೆ. ಅವರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಭರತ್ ತೆಲುಗಿನ ಉದಯೋನ್ಮುಖ ನಟ. ಅವರು ನಾಯಕನಾಗಿ ನಟಿಸಿದ ಪ್ರಥಮ ಚಿತ್ರ `ಉಲ್ಲಾಸಂಗ-ಉತ್ಸಾಂಗ' 200 ದಿನ ಪ್ರದರ್ಶನ ಕಾಣುವ ಮೂಲಕ ಯಶಸ್ಸು ತಂದುಕೊಟ್ಟಿತ್ತು. ಭರತ್ ಶವವನ್ನು ಅವರ ಮನೆ ಇರುವ ಬೆಂಗಳೂರಿನ ಆರ್ಪಿಸಿ ಬಡಾವಣೆಗೆ ತೆಗೆದುಕೊಂಡು ಹೋಗಲಾಯಿತು.