ನವದೆಹಲಿ (ಪಿಟಿಐ): ದಕ್ಷಿಣ ದೆಹಲಿಯಲ್ಲಿ ಸೋಮವಾರ ಸಂಜೆ ಅಪಘಾತ ನಡೆದ ಸಂದರ್ಭದಲ್ಲಿ ಪಾಕಿಸ್ತಾನದ ಹಿರಿಯ ರಾಜತಾಂತ್ರಿಕ ಅಧಿಕಾರಿ ಮತ್ತು ಅವರ ವಾಹನದ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ವರದಿಯಾಗಿದೆ.
ಪಾಕ್ ಹೈಕಮಿಷನ್ನಿನ ಮೊದಲ ಕಾರ್ಯದರ್ಶಿ (ವ್ಯಾಪಾರ) ಜಿರ್ಗಮ್ ರಾಜಾ ಅವರು ಮನೆಗೆ ಹಿಂದಿರುಗುತ್ತಿದ್ದಾಗ ಸಂಜೆ 7.25ರ ಸುಮಾರಿಗೆ ಬೆರ್ ಸರಾಯ್ ಎಂಬಲ್ಲಿ ಈ ಘಟನೆ ನಡೆದಿದೆ.
`ರಾಜಾ ಅವರಿದ್ದ ವಾಹನ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆಯಿತು. ಇದೊಂದು ಪುಟ್ಟ ಅಪಘಾತವಾಗಿದ್ದು, ಯಾರಿಗೂ ಗಾಯಗಳಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ಈ ಘಟನೆ ಬಗ್ಗೆ ವಿವಿಧ ರೀತಿಯ ಹೇಳಿಕೆಗಳು ಕೇಳಿ ಬಂದಿವೆ. ಘಟನೆ ಖಂಡಿಸಿರುವ ಪಾಕ್ ಹೈಕಮಿಷನ್, ವಿದೇಶಾಂಗ ಸಚಿವಾಲಯಕ್ಕೆ ತನ್ನ ಪ್ರತಿಭಟನೆ ದಾಖಲಿಸಿದೆ.
ರಾಜತಾಂತ್ರಿಕ ಅಧಿಕಾರಿ ಮತ್ತು ಚಾಲಕನ ಮೇಲೆ ಕೆಲವರು ಹಲ್ಲೆ ನಡೆಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಇಲ್ಲಿರುವ ಪಾಕ್ ಅಧಿಕಾರಿಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದೆ.