ಸಿದ್ದಾಪುರ: ತಾಲ್ಲೂಕಿನ ಸಿದ್ದಾಪುರ-ಶಿರಸಿ ರಸ್ತೆಯಲ್ಲಿ ತುಂಬರಗೋಡು ಕ್ರಾಸ್ ಸಮೀಪ ಕಾರು ಮತ್ತು ಲಾರಿ ಮಧ್ಯೆ ಶನಿವಾರ ಮಧ್ಯಾಹ್ನ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಬಳ್ಳಾರಿಯ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯ ಸಂಗೇಶ ಲಿಂಗಪ್ಪ ಚಿಂಗನಳ್ಳಿ (42), ರಾಧಾ (36), ಅಕ್ಷಯ (15) ಮತ್ತು ಅಕ್ಷತಾ (13) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಕೆ.ಸುನೀಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸಂಗೇಶ ಗದಗದ ಅರಣ್ಯ ಇಲಾಖೆಯಲ್ಲಿ ಕೆಲಸದಲ್ಲಿದ್ದು, ಜೋಗದ ಪ್ರವಾಸಕ್ಕೆ ಪತ್ನಿ ಮತ್ತು ಮಕ್ಕಳೊಂದಿಗೆ ಬಂದಿದ್ದರು. ಜೋಗದಿಂದ ವಾಪಸ್ ಸಿದ್ದಾಪುರ- ಶಿರಸಿ ಮೂಲಕ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.