ಮುಳಬಾಗಲು: ತಾಲ್ಲೂಕಿನ ಮುದುಗೆರೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಪುಟ್ಟವೆಂಕಟೇಶಯ್ಯ (72), ಇವರ ಪತ್ನಿ ಪುಷ್ಪಲತಾ (65), ಮಗ ಅರವಿಂದ ಕುಟ್ಟಿ (40), ಸೊಸೆ ರೀಣಾಲಕ್ಷ್ಮೀ (35), ಮೊಮ್ಮಕ್ಕಳಾದ ನಿಶಾ (11), ನಿತೀಶ್ (7) ಎಂದು ಗುರುತಿಸಲಾಗಿದೆ. ಇವರೆಲ್ಲ ಬೆಂಗಳೂರಿನಿಂದ ತಿರುಪತಿಗೆ ಕಾರಿನಲ್ಲಿ ಹೋಗುತ್ತಿದ್ದರು. ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಕಾರಿನ ಚಾಲಕ ಯತ್ನಿಸಿದಾಗ ನಿಯಂತ್ರಣ ತಪ್ಪಿದ ಕಾರು ಎದುರುಗಡೆಯಿಂದ ಬರುತ್ತಿದ್ದ ಟ್ಯಾಂಕರ್ಗೆ ಡಿಕ್ಕಿ ಹೊಡೆಯಿತು. ಪುಟ್ಟವೆಂಕಟೇಶಯ್ಯ ಬೆಂಗಳೂರಿನ ವಿಲ್ಸನ್ಗಾರ್ಡನ್ನಲ್ಲಿ ಆಟೊ ಸಾಲದ ವಹಿವಾಟು ನಡೆಸುತ್ತಿದ್ದರು. ಮಗ ಅರವಿಂದ ಕುಟ್ಟಿ ಸಾಫ್ಟ್ವೇರ್ ಎಂಜಿನಿಯರ್.
ವಾಹನದಲ್ಲಿ ಸಿಕ್ಕಿಹಾಕಿಕೊಂಡ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರಿಗೆ ಗ್ರಾಮಸ್ಥರು ಸಹಕರಿಸಿದರು. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಗಂಟೆ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.