ತಾಳಿಕೋಟೆ (ವಿಜಾಪುರ ಜಿಲ್ಲೆ): ಇಲ್ಲಿಗೆ ಸಮೀಪದ ಮಿಣಜಗಿ ಬಳಿ ಬಸ್ ಹಾಗೂ ಜೀಪ್ ನಡುವೆ ಸೋಮವಾರ ಡಿಕ್ಕಿ ಸಂಭವಿಸಿ ಜೀಪಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮೃತರನ್ನು ಜೀಪ್ ಚಾಲಕ ಬೇಕಿನಾಳದ ಶಶಿಕಾಂತ ಸಿದ್ಧಪ್ಪ ಸಿಂದಗೇರಿ (22) ಹಾಗೂ ಶಾಲಾ ಬಾಲಕಿ ಬೀಬಿಫಾತಿಮಾ ಜಾಫರುದ್ದೀನ್ ಸಾಲಗಾರ (11) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ವಿಜಾಪುರಕ್ಕೆ ಕಳುಹಿಸಲಾಯಿತು.
ಸಿಂದಗಿ ತಾಲ್ಲೂಕಿನ ಬೇಕಿನಾಳ ಗ್ರಾಮದ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಎರಡು ದಿನಗಳ ಶೈಕ್ಷಣಿಕ ಪ್ರವಾಸಕ್ಕೆಂದು ಎರಡು ಜೀಪ್ಗಳಲ್ಲಿ ಹೊರಟಿದ್ದರು. ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದಕ್ಕೆ ಹಾಕುವ ಅವಸರದಲ್ಲಿ ಎದುರಿಗೆ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿಗೆ ಜೀಪ್ ಡಿಕ್ಕಿ ಹೊಡೆಯಿತು.