ಮಾಲೂರು: ಪಟ್ಟಣದ ಕೈಗಾರಿಕಾ ಆವರಣದ ಬಳಿ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ವಾಹನ ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಬಸ್ಸಿನಲ್ಲಿದ್ದ 26 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ತಮಿಳುನಾಡಿನ ಹೊಸೂರಿನಿಂದ ಮಾಲೂರಿಗೆ ಬರುತ್ತಿದ್ದ ರಂಗು ವಿಲಾಸ್ ಖಾಸಗಿ ಬಸ್ಗೆ ದ್ವಿಚಕ್ರ ವಾಹನ ಅಡ್ಡ ಬಂದ ಪರಿಣಾಮ ದ್ವಿಚಕ್ರ ವಾಹನದ ಮೇಲೆ ಹರಿದು ಪಕ್ಕದ ಮರಕ್ಕೆ ಡಿಕ್ಕಿಹೊಡೆದಿದೆ. ಇದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ತಾಲ್ಲೂಕಿನ ಹುಳದೇನಹಳ್ಳಿ ಗ್ರಾಮದ ನಿವಾಸಿ ಸಂತೋಷ್ (18) ಎಂದು ಗುರುತಿಸಲಾಗಿದೆ.
ಬಸ್ನಲ್ಲಿದ್ದ 26 ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ತಹಶೀಲ್ದಾರ್ ಎಚ್.ಅಮರೇಶ್ ಭೇಟಿ ನೀಡಿದರು.
ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಕೇಶವ ಮೂರ್ತಿ, ಸಬ್ ಇನ್ಸ್ಪೆಕ್ಟರ್ ಶಿವಸ್ವಾಮಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.