ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಯುವಕ ಸಾವು: ಆಕ್ರೋಶ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ಸಕಲೇಶಪುರ: ಪಟ್ಟಣದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ  ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ  ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ವಾಹನಗಳನ್ನು ಜಖಂಗೊಳಿಸಿ, ಅಂಗಡಿ ಮುಂಗಟ್ಟುಗಳಿಗೆ ಕಲ್ಲು ತೂರಿ ಪ್ರತಿಭಟನೆ ನಡೆಸಿದ ಘಟನೆ  ಭಾನುವಾರ ನಡೆಯಿತು.

ಇಲ್ಲಿಯ ಕುಶಾಲನಗರ ಬಡಾವಣೆ ನಿವಾಸಿ ಫರಾಜ್ (23) ಮೃತಪಟ್ಟ ಯುವಕ. ಬೈಕ್ ಹಿಂಬದಿ ಸವಾರ ಮುಸ್ತಾಫಾ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫರಾಜ್ ಜೂನ್ 26ರಂದ ಬೆಂಗಳೂರಿನಲ್ಲಿ ಪ್ರೇಮ ವಿವಾಹವಾಗಿ ಭಾನುವಾರ ಪಟ್ಟಣಕ್ಕೆ ಬಂದಿದ್ದರು ಎನ್ನಲಾಗಿದೆ. ಪತ್ನಿಯನ್ನು ಮನೆಯಲ್ಲಿ ಬಿಟ್ಟು ಸ್ನೇಹಿತನೊಂದಿಗೆ ಪಟ್ಟಣಕ್ಕೆ ಬಂದಾಗ ಈ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಹಾಸನ ಕಡೆಗೆ ತೆರಳುತ್ತಿದ್ದ ಸಿಮೆಂಟ್ ಕಾಂಕ್ರೀಟ್ ತುಂಬಿದ ಟ್ಯಾಂಕರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ನಡೆದ ಸ್ಥಳದಿಂದ ಕೆಲವೇ ಅಡಿಗಳ ದೂರದಲ್ಲಿ ಜುಲೈ 5ರಂದು ಟ್ಯಾಂಕರ್ ಚಕ್ರಕ್ಕೆ ಸಿಕ್ಕಿ ಮಹಿಳೆ ಮೃತಪಟ್ಟಿದ್ದಳು. ಈ ಎರಡೂ ಘಟನೆಗಳಿಂದ ತೀವ್ರ ಆಕ್ರೋಶಗೊಂಡ ಸಾರ್ವಜನಿಕರು ರಸ್ತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ, ರಸ್ತೆ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಿದರು.

ಘಟನೆಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳು, ಅಪಘಾತ ಮಾಡಿದ ಟ್ಯಾಂಕರ್ ಸೇರಿದಂತೆ ಅದೇ ಕಂಪೆನಿಯ 3 ಟ್ಯಾಂಕರ್‌ಗಳು, 10ಕ್ಕೂ ಹೆಚ್ಚು ಕಾರುಗಳು, ಬೈಕುಗಳನ್ನು ಜಖಂಗೊಂಡವು. ಮೃತದೇಹವನ್ನು ಅದೇ ಸ್ಥಳದಲ್ಲಿಟ್ಟು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ನೇತೃತ್ವದಲ್ಲಿ ಧರಣಿ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ವಿಸ್ತರಣೆಯನ್ನು ಕೂಡಲೆ ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT