ಮುದ್ದೇಬಿಹಾಳ: ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆಗೆ ಪ್ರತಿಯೊಬ್ಬ ನಾಗರಿಕನೂ ವೈಯಕ್ತಿಕವಾಗಿ ಪೊಲೀಸ ರಂತೆಯೇ ಕಾರ್ಯನಿರ್ವಹಿಸಿದಾಗ ಮಾತ್ರ ಅಪರಾಧ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಸಾಧ್ಯ ಎಂದು ಉತ್ತರ ವಲಯ ಐ.ಜಿ.ಪಿ. ಚರಣರಡ್ಡಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಮಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಪೊಲೀಸರ ಕೊರತೆ ಎಲ್ಲ ಠಾಣೆಗಳಲ್ಲೂ ಇದೆ. ಇದನ್ನು ನಿವಾರಿಸಲು ಸರ್ಕಾರ ಅಗತ್ಯ ಕ್ರಮ ಕೈಕೊಳ್ಳುತ್ತಿದೆ ಎಂದರು.
ನಾಲತವಾಡಕ್ಕೆ ಸಹ ಪೊಲೀಸ್ ಠಾಣೆ ಒದಗಿಸುವ ಪ್ರಸ್ತಾಪ ಇದೆ.
ಅಪರಾಧ ಸಂಖ್ಯೆ ಇರದ ಪ್ರದೇಶದಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವುದಿಲ್ಲ ಎಂದು ಹೇಳಿದರು. ಬಂದೂಕು ತರಬೇತಿ ಪಡೆಯಲು ಬಂದೂಕು ಲೈಸೆನ್ಸ್ ಹೊಂದಿರುವವರ ಸಮಿತಿ ರಚನೆ ಮಾಡಿಕೊಂಡರೆ ಆ ಮೂಲಕ ನಾಗರಿಕರಿಗೆ ತರಬೇತಿ ನೀಡಲು ಗೃಹ ಇಲಾಖೆಗೆ ಅನುಕೂಲವಾಗುತ್ತದೆ ಎಂದವರು ತಿಳಿಸಿದರು.
ಪ್ರವಾಸಿ ಮಂದಿರದಿಂದ ನೇರವಾಗಿ ಠಾಣೆಗೆ ಬಂದ ಐಜಿಪಿ ಅವರಿಗೆ ಪಿ.ಎಸ್.ಐ. ಎಸ್.ಬಿ.ಮಾಳಗೊಂಡ ಗೌರವ ವಂದನೆ ನೀಡಿ ಸ್ವಾಗತಿಸಿದರು. ಎಸ್.ಪಿ. ಡಾ.ಡಿ.ಸಿ.ರಾಜಪ್ಪ, ಡಿ.ವೈ.ಎಸ್.ಪಿ. ಎಂ.ವೈ.ಬಾಲದಂಡ, ಸಿ.ಪಿ.ಐ. ವಿಠ್ಠಲ ಏಳಗಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.