ಬೆಂಗಳೂರು: `ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲವೆಂದು ಎಲ್ಲ ರಾಜಕೀಯ ಪಕ್ಷಗಳು ಸಾರ್ವತ್ರಿಕವಾಗಿ ಘೋಷಣೆ ಮಾಡುವ ಅಗತ್ಯವಿದೆ~ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಇತ್ತೀಚೆಗೆ ಇಲ್ಲಿ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಶಾಸಕರ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಚುನಾವಣಾ ಕಾಯ್ದೆ ಸಮಗ್ರ ಬದಲಾವಣೆ~ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
`ಆರೋಪ ಪಟ್ಟಿ ದಾಖಲಾದಂತಹ ವ್ಯಕ್ತಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬಾರದು.
ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈ ನಿಯಮವನ್ನು ಕಡ್ಡಾಯವಾಗಿ ಅನುಸರಿಸಬೇಕು. ಟಿಕೆಟ್ ನೀಡುವಾಗ ಪ್ರಾಮಾಣಿಕ, ಸಚ್ಚಾರಿತ್ರ್ಯವುಳ್ಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ವತಿಯಿಂದ ಪದಾಧಿಕಾರಿಗಳ ತಂಡವನ್ನು ರಚಿಸಬೇಕು. ಅದು ಪಕ್ಷಾತೀತವಾಗಿ ಕೆಲಸ ಮಾಡಬೇಕು.
ಆದರೆ, ಪ್ರತಿಭಟನೆ- ಚಳವಳಿಗಳಲ್ಲಿ ಭಾಗವಹಿಸಿ ಹೋರಾಟ ನಡೆಸಿದವರ ವಿರುದ್ಧ ಆರೋಪ ಪಟ್ಟಿ ದಾಖಲಾದರೆ ಅದಕ್ಕೆ ವಿನಾಯಿತಿ ನೀಡುವುದನ್ನು ಕಾನೂನಿನಲ್ಲಿ ಸೇರಿಸಬೇಕು~ ಎಂದು ಸಲಹೆ ಮಾಡಿದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ವಾಟಾಳ್ ನಾಗರಾಜ್, `ಭ್ರಷ್ಟರು, ಲೂಟಿ ಮಾಡಿದವರು, ಜಾತಿವಾದಿಗಳು, ಕ್ರಿಮಿನಲ್ಗಳಿಗೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು `ಬಿ~ ಫಾರಂ ನೀಡಬಾರದು.
ಮತದಾರರಿಗೆ ಹಣ ಕೊಡುವುದು ಕೂಡ ಒಂದು ರೀತಿಯಲ್ಲಿ ಲಂಚ ನೀಡಿದಂತೆ. ಇದಕ್ಕೆ ಕಡಿವಾಣ ಹಾಕಲು ಚುನಾವಣೆ ಕಾಯ್ದೆಯಲ್ಲಿ ಸಮಗ್ರ ಬದಲಾವಣೆ ತರಬೇಕಾಗಿದೆ~ ಎಂದರು.ಹಿರಿಯ ಕಾರ್ಮಿಕ ಮುಖಂಡ ಎಂ.ಸಿ. ನರಸಿಂಹನ್, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಚಲನಚಿತ್ರ ನಿರ್ಮಾಪಕ ಶಿವಶಂಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಎನ್.ಮೂರ್ತಿ ಮಾತನಾಡಿದರು. ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್. ಕುಮಾರ್ ಸ್ವಾಗತಿಸಿ, ನಿರೂಪಿಸಿದರು.