ಚಿಕ್ಕಬಳ್ಳಾಪುರ: ಅಮೆರಿಕ ಸಾಮ್ರಾಜ್ಯಶಾಹಿ ವಿರುದ್ಧ ಸಮರ ಸಾರಿದ ಕ್ರಾಂತಿಯೋಧನೆಂದೇ ಗೌರವಿಸಲ್ಪಡುವ ಅರ್ನೆಸ್ಟೊ ಚೆಗುವೆರಾ, ಕ್ಯೂಬಾ ದೇಶವನ್ನು ಸುಭದ್ರಗೊಳಿಸಿದ ಫಿಡೆಲ್ ಕ್ಯಾಸ್ಟ್ರೊ, ಕಮ್ಯೂನಿಸಂ ಸಿದ್ಧಾಂತವನ್ನು ವಿಶ್ವಾದ್ಯಂತ ವ್ಯಾಪಿಸುವಂತೆ ಮಾಡಿದ ಕಾರ್ಲ್ ಮಾರ್ಕ್ಸ್, ವಿ.ಐ.ಲೆನಿನ್ ಮುಂತಾದವರ ನೈಜವಾದ ಛಾಯಾಚಿತ್ರಗಳನ್ನು ನೋಡಬೇಕಿದ್ದರೆ, ಸಿಪಿಎಂ 20ನೇ ರಾಜ್ಯ ಸಮ್ಮೇಳನದ ಸ್ಥಳವಾದ ಜ್ಯೋತಿಬಸು ನಗರಕ್ಕೆ ಭೇಟಿ ನಿಡಬೇಕು.
ನಗರದ ಒಕ್ಕಲಿಗರ ಭವನದ ಆವರಣದಲ್ಲಿ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದ್ದು, ಆಯಾ ಘಟನೆಗಳ ವಿವರಣೆಯನ್ನು ನೀಡಲಾಗಿದೆ. ಸಿಪಿಎಂನ ಪ್ರಮುಖ ನೇತಾರ ಎ.ಕೆ.ಗೋಪಾಲನ್ ಅವರ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿದ ಕಲಾಕೃತಿಗಳ ಪ್ರದರ್ಶನವನ್ನೂ ಸಹ ಏರ್ಪಡಿಸಲಾಗಿದೆ.
ಚೆಗುವೇರಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಮಾನ್ಯ ಭಾರತೀಯನೊಬ್ಬ ಕೊರಳಿಗೆ ಹೂಮಾಲೆ ಹಾಕಿದ್ದು, ಕಾರ್ಲ್ ಮಾರ್ಕ್ಸ್ ಮತ್ತು ವಿ.ಐ.ಲೆನಿನ್ ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡುವುದು. ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಮುಂತಾದ ಕಪ್ಪುಬಿಳುಪಿನ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.
ಸಿಪಿಎಂ ಜಿಲ್ಲಾ ಘಟಕವು ಜಿಲ್ಲೆಯ ವಿವಿಧೆಡೆ ಕೈಗೊಂಡ ವಿವಿಧ ಪ್ರತಿಭಟನೆ, ಹೋರಾಟಗಳ ಬಗ್ಗೆ ಬೆಳಕು ಚೆಲ್ಲುವಂತಹ ಛಾಯಾಚಿತ್ರಗಳನ್ನು ಸಹ ಪ್ರದರ್ಶಿಸಲಾಗಿದೆ. ಪ್ರದರ್ಶನವನ್ನು ವೀಕ್ಷಿಸಿದವರು ತಮ್ಮ ಅನಿಸಿಕೆಯನ್ನು ಅಲ್ಲಿರುವ ಪುಸ್ತಕದಲ್ಲಿ ದಾಖಲಿಸಬಹುದು.
ಪ್ರದರ್ಶನದ ಬಳಿಯೇ ಪುಸ್ತಕಮಾಲಾ ಪ್ರಕಾಶನವು ಪುಸ್ತಕ ಮಳಿಗೆಯನ್ನು ಇಟ್ಟಿದೆ. ಕನ್ನಡ ಮತ್ತು ಇಂಗ್ಲಿಷ್ ಕೃತಿಗಳು ಅಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಕ್ರಾಂತಿಕಾರಿ ಗೀತೆಗಳ ಸಿ.ಡಿಗಳೂ ದೊರೆಯುತ್ತವೆ.