ಬೆಂಗಳೂರು: `ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಆರ್ಜೆಡಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನನ್ನನ್ನು, ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ಅಪಹರಿಸಿ ನಾಮಪತ್ರ ಹಿಂಪಡೆದ ಬಳಿಕ ಬಿಟ್ಟಿದ್ದಾರೆ' ಎಂದು ಆರ್.ಲೋಕೇಶ್ ಆರೋಪಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಏ. 17ರಂದು ನಾನು ನಾಮಪತ್ರ ಸಲ್ಲಿಸಿದ್ದೆ. ಅಂದು ಮಧ್ಯರಾತ್ರಿ ಸ್ಥಳೀಯರಾದ ತ್ಯಾಗರಾಜ್, ನವೀನ್, ಮನೋಹರ್, ನಾರಾಯಣಸ್ವಾಮಿ, ಡೇವಿಡ್, ರಾಜೇಶ, ನಾಗೇಶ, ಮುನಿರಾಜು, ಲಕ್ಷ್ಮಿನಾರಾಯಣ ಮತ್ತಿತರರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದರು. ಜಾತಿನಿಂದನೆಯನ್ನೂ ಮಾಡಿದ ಅವರು ಹಲ್ಲೆ ನಡೆಸಿ, ವಾಹನದಲ್ಲಿ ನನ್ನನ್ನು ಅಪಹರಿಸಿ, 25 ಕಿ.ಮೀ ದೂರದ ಮನೆಯೊಂದರಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರು. ಏ.18ರಂದು ಬಲವಂತದಿಂದ ನಾಮಪತ್ರ ವಾಪಸ್ ಪಡೆದು, ನಂತರ ಬಿಟ್ಟಿದ್ದಾರೆ' ಎಂದು ದೂರಿದ್ದಾರೆ.
`ಚುನಾವಣಾ ಆಯೋಗಕ್ಕೆ ಮತ್ತು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ. ಆದರೂ ಈತನಕ ಕ್ರಮ ಕೈಗೊಂಡಿಲ್ಲ. ಇದೀಗ ಕೊಲೆ ಬೆದರಿಕೆ ಇರುವುದರಿಂದ ಬೆಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ' ಎಂದು ಅಳಲು ತೋಡಿಕೊಂಡರು.