ನವದೆಹಲಿ (ಪಿಟಿಐ): ಸೋಮಾಲಿಯ ಕಡಲ್ಗಳ್ಳರಿಂದ ತಮ್ಮವರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಸಂಧಾನ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಪಹೃತ ಭಾರತೀಯ ನಾವಿಕರ ಕುಟುಂಬ ಸದಸ್ಯರು ಶುಕ್ರವಾರ ಇಲ್ಲಿಯ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಿದರು.
`ನನ್ನ ಸಹೋದರ ಸೌರವ ಕುಮಾರ್ ಕಳೆದ 9 ತಿಂಗಳ ಹಿಂದೆ ಈ ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದು ಇದೇ 20ರತನಕ ಅವರು ಗಡುವು ನೀಡಿದ್ದರು. ಹಾಗಾಗಿ ಆತನ ಸ್ಥಿತಿ ಏನಾಗಿದೆಯೋ ಏನೋ ಎಂದು ಪ್ರತಿಭಟನಾಕಾರ ಸುಶೀಲ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
ಒತ್ತೆಯಾಳುಗಳಿಗೆ ಹಿಂಸೆ ನೀಡುತ್ತಿದ್ದು, ಅತ್ಯಲ್ಪ ಆಹಾರ ನೀಡಲಾಗುತ್ತಿದೆ ಎಂದು ಅಪಹರಣಕ್ಕೆ ಒಳಗಾದ ಕೇರಳದ ದಿಬಿನ್ ತಾಯಿ ಶೈಜಿ ಗೋಳು ತೋಡಿಕೊಂಡಳು.
`ಅವರು (ಕಡಲ್ಗಳ್ಳರು) 1.7 ದಶಲಕ್ಷ ಡಾಲರ್ ಬೇಡಿಕೆ ಇಟ್ಟಿದ್ದು, ಅಷ್ಟೊಂದು ಹಣವನ್ನು ನಾವು ಎಲ್ಲಿಂದ ತರೋಣ' ಎಂದು ಮೀರತ್ನಿಂದ ಆಗಮಿಸಿದ್ದ ಕುಮಾರ್ ಅಳಲು ತೋಡಿಕೊಂಡರು.
ಒತ್ತೆಯಾಳುಗಳ ಶೀಘ್ರ ಬಿಡುಗಡೆಗಾಗಿ ನಾವು ಬಂದರು ಸಚಿವ ಜಿ.ಕೆ. ವಾಸನ್, ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದ್ದರೂ ಸಿಕ್ಕಿದ್ದು ಬರಿ ಭರವಸೆ ಮಾತ್ರ, ಈ ಸಂಬಂಧ ಯಾವುದೇ ಕೈಗೊಂಡಿಲ್ಲ ಎಂದು ದೂರಲಾಯಿತು.